ADVERTISEMENT

ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಮೇ 26ರಂದು

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:32 IST
Last Updated 20 ಮೇ 2019, 19:32 IST

ಧಾರವಾಡ: ‘ಹಾವೇರಿಯ ಕಲಾ ಸ್ಪಂದನ ಸಂಸ್ಥೆಯಿಂದ ಮೌನೇಶ್ವರ ಕತ್ತಿ ಅವರ ಹೆಸರಿನಲ್ಲಿ ಪ್ರಸಕ್ತ ವರ್ಷದಿಂದ ವೈದ್ಯಶ್ರೀ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದು ಕಾರ್ಯಕ್ರಮ ಸಂಯೋಜಕ ಮಾರ್ತಾಂಡಪ್ಪ ಕತ್ತಿ ಹೇಳಿದರು.

‘ಪ್ರಸಕ್ತ ಸಾಲಿನ ವೈದ್ಯಶ್ರೀ ಪ್ರಶಸ್ತಿಗೆ ಬೆಂಗಳೂರಿನ ಡಾ.ಶಿವಕುಮಾರ ಉಪ್ಪಳ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಶಸ್ತಿ ಪ್ರದಾನ ಸಮಾರಂಭ ಮೇ 26ರಂದು ಸಂಜೆ 5ಕ್ಕೆ ನಗರದ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ. ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರು ಪ್ರಶಸ್ತಿ ಪ್ರದಾನ ಮಾಡುವರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದರು.

ADVERTISEMENT

‘ಇದೇ ವೇಳೆಬೆಂಗಳೂರಿನ ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ವಿದ್ಯಾರ್ಥಿಗಳ ಜೀವನದಲ್ಲಿ ಹೆತ್ತವರ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡುವರು. ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುವರು.ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

‘ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸಂಗೀತದೊಂದಿಗೆ ಮರಳು ಕಲೆಯ ಗಾನಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಾನಂದಾ ಗೋಸಾವಿ ಅವರಿಂದ ಗಾಯನ ನಡೆಯಲಿದ್ದು, ತಬಲಾದಲ್ಲಿ ಅನಿಲ ಮೇತ್ರಿ, ವಾಯಲಿನ್‌ದಲ್ಲಿ ವಾದಿರಾಜ ನಿಂಬರಗಿ, ಹಾರ್ಮೋನಿಯಂನಲ್ಲಿ ಪರಶುರಾಮ ಕಟ್ಟಿಸಂಗಾವಿ ಸಾಥ್ ನೀಡುವರು. ಮರಳು ಕಲಾವಿದ ಮಂಜುನಾಥ ಹಿರೇಮಠ ಅವರು ಗಾಯನಕ್ಕೆ ತಕ್ಕಂತೆ ಮರಳು ಕಲೆಯನ್ನು ಅನಾವರಣ ಮಾಡುವರು’ ಎಂದರು.

ವೈ.ಎಚ್.ಬಣವಿ, ಪ್ರೇಮಾನಂದ ಶಿಂಧೆ, ಭೀಮಾಶಂಕರ ಬೆಳ್ಳುಂಡಗಿ, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.