ADVERTISEMENT

ಧರಣಿ ಹಿಂಪಡೆದ ವಜಾಗೊಂಡಿರುವ ಜಲಮಂಡಳಿ ನೌಕರರು

ಹಂತ ಹಂತವಾಗಿ ಮರುನೇಮಕಕ್ಕೆ ಶಾಸಕ ಬೆಲ್ಲದ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 6:04 IST
Last Updated 1 ಮಾರ್ಚ್ 2023, 6:04 IST
ಧಾರವಾಡದ ಪಾಲಿಕೆ ಕಚೇರಿ ಎದುರು ಸತ್ಯಾಗ್ರಹ ನಡೆಸುತ್ತಿರುವ ಜಲಮಂಡಳಿ ನೌಕರರು ಡಾ. ಬಿ.ಗೋಪಾಲಕೃಷ್ಣ ಅವರಿಗೆ ಮನವಿಪತ್ರ ನೀಡಿದರು. ಬಸವರಾಜ ಕೊರವರ ಹಾಗೂ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಇದ್ದಾರೆ.
ಧಾರವಾಡದ ಪಾಲಿಕೆ ಕಚೇರಿ ಎದುರು ಸತ್ಯಾಗ್ರಹ ನಡೆಸುತ್ತಿರುವ ಜಲಮಂಡಳಿ ನೌಕರರು ಡಾ. ಬಿ.ಗೋಪಾಲಕೃಷ್ಣ ಅವರಿಗೆ ಮನವಿಪತ್ರ ನೀಡಿದರು. ಬಸವರಾಜ ಕೊರವರ ಹಾಗೂ ಕಾಂಗ್ರೆಸ್‌ನ ಪಾಲಿಕೆ ಸದಸ್ಯರು ಇದ್ದಾರೆ.   

ಧಾರವಾಡ: ‘ವಜಾಗೊಂಡು ಕಳೆದ 30 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿರುವ 358 ಜಲಮಂಡಳಿ ನೌಕರರನ್ನು ಮುಂದಿನ ಎರಡು ತಿಂಗಳಲ್ಲಿ ಹಂತ ಹಂತವಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಶಾಸಕ ಅರವಿಂದ ಬೆಲ್ಲದ ಅವರ ಭರವಸೆಯಂತೆ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ’ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ತಿಳಿಸಿದರು.

‘ಪಾಲಿಕೆ ಕಚೇರಿ ಎದುರು ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ, ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ನಂತರ ಪಾಲಿಕೆ ಆಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ನೌಕರರ ಮರುನಿಯೋಜನೆ ಮಾಡುವಂತೆ ತಿಳಿಸಿದರು. ಆಯುಕ್ತರು ಸ್ಪಂದಿಸಿದ್ದರಿಂದ, ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜತೆಗೆ ತಕ್ಷಣವೇ ಬಾಕಿ ಇರುವ ನಾಲ್ಕು ತಿಂಗಳ ವೇತನ ನೀಡುವುದಾಗಿಯೂ ತಿಳಿಸಿದ್ದಾರೆ’ ಎಂದರು.

ಮಂಗಳವಾರ ಬೆಳಿಗ್ಗೆ ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ ಅವರು ಧರಣಿ ಸ್ಥಳಕ್ಕೆ ಭೇಟಿ ನೀಡಿ, 82 ಜನರನ್ನು ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಪ್ರಸ್ತಾವನೆ ತಿರಸ್ಕರಿಸಿದ ಕೊರವರ, ಸೇರಿಸಿಕೊಂಡರೆ ಎಲ್ಲರನ್ನೂ ಸೇರಿಸಿಕೊಳ್ಳಿ. ಇಲ್ಲವಾದಲ್ಲಿ ಸತ್ಯಾಗ್ರಹ ಮುಂದುವರಿಯಲಿದೆ ಎಂದಿದ್ದರು.

ADVERTISEMENT

ಪಾಲಿಕೆಯ ವಿರೋಧ ಪಕ್ಷಗಳ ಸದಸ್ಯರು, ಕಾಂಗ್ರೆಸ್ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ನೌಕರರನ್ನು ಬೆಂಬಲಿಸಿದರು.

ಸಂಜೆ ಭೇಟಿ ನೀಡಿದ ಅರವಿಂದ ಬೆಲ್ಲದ, ನೌಕರರಿಗೆ ಎಳನೀರು ಕುಡಿಸಿದರು. ಆ ಮೂಲಕ ನೌಕರರು ಸತ್ಯಾಗ್ರಹ ಕೊನೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.