ಮಡಿಕೇರಿ: ‘ಕನ್ನಡ ಭಾಷೆಯ ಬೆಳವಣಿಗೆಗೆ ಜೀವಂತ ನೆಲೆ ನೀಡುವಲ್ಲಿ ಇಂದಿನ ಯುವ ಸಮೂಹ ವಿಫಲವಾಗಿರುವುದು ಬೇಸರದ ಸಂಗತಿ. ಹಿರಿಯರು ಅತೀ ಅಭಿಮಾನ ಹಾಗೂ ಕಾಳಜಿಯಿಂದ ಉಳಿಸಿಕೊಂಡು ಬಂದಿರುವ ಶ್ರೀಮಂತ ಕನ್ನಡತನವನ್ನು ಉಳಿಸುವ ಕಾರ್ಯವನ್ನು ಇಂದಿನ ಯುವ ಸಮೂಹವೂ ಮಾಡಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಕರೆ ನೀಡಿದರು.
ಜಿಲ್ಲಾ ಸಿರಿಗನ್ನಡ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ‘ಯುದ್ಧ ಮತ್ತು ನಾಗರಿಕತೆ’ ಡಿಜಿಟಲ್ ಪುಸ್ತಕ ಅನಾವರಣ ಮಾಡಿ ಅವರು ಮಾತನಾಡಿದರು.
‘ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉಳಿಸಿ–ಬೆಳೆಸುವಲ್ಲಿ ಹಲವು ಮಂದಿ ಸಾಹಿತಿಗಳು ಹಾಗೂ ವಚನಕಾರರು ನೀಡಿದ ಕೊಡುಗೆ ಅಪಾರ’ ಎಂದು ಸ್ಮರಿಸಿದರು.
‘ಪ್ರಸ್ತುತ ದಿನಗಳಲ್ಲಿ ಪ್ರಯತ್ನಶೀಲ ಬದುಕು ಕಟ್ಟಿಕೊಳ್ಳುವ ಸಂದರ್ಭ ಅನೇಕ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ, ಮನಸ್ಸು ಮನಸ್ಸುಗಳು ಹತ್ತಿರವಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಇದರಿಂದ ಎಲ್ಲವನ್ನೂ ಪ್ರೀತಿಯಿಂದ ಸಾಧಿಸಬಹುದು’ ಎಂದು ರಮೇಶ್ ಹೇಳಿದರು.
ವಕೀಲ ಕೆ.ಆರ್.ವಿದ್ಯಾಧರ ಮಾತನಾಡಿ, ‘ದೇಶ ಪ್ರೇಮ ಮತ್ತು ಯುದ್ಧದ ಮನಸ್ಥಿತಿಯ ಬಗ್ಗೆ ಪ್ರತಿಯೊಬ್ಬರು ಅಧ್ಯಯನ ಮಾಡಬೇಕಾಗುತ್ತದೆ. ಯುದ್ಧದಿಂದ ಮಾನವನ ನಾಶವೇ ಹೊರತು ಯಾವುದೇ ಪ್ರಯೋಜನವಿಲ್ಲ’ ಎಂದು ತಮ್ಮ ಅನಿಸಿಕೆ ತಿಳಿಸಿದರು.
‘ಪ್ರಸ್ತುತ ದಿನಗಳಲ್ಲಿ ಯುದ್ಧದ ಮನಸ್ಥಿತಿಯನ್ನು ಹೊಂದಿರುವುದೇ ಅಪಾಯಕಾರಿ ಹಾಗೂ ವಿನಾಶಕಾರಿಯಾಗಿದೆ. ಆದ್ದರಿಂದ, ಮಾಧ್ಯಮಗಳು ಸೇರಿದಂತೆ ಎಲ್ಲರೂ ಯುದ್ಧ ಪ್ರಸ್ತಾಪದ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ಟಿ.ಪಿ.ರಮೇಶ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್, ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲಾ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ, ರೆಜಿತ್ ಕುಮಾರ್ ಗುಹ್ಯ ಉಪಸ್ಥಿತರಿದ್ದರು.
ಡಿಜಿಟಲ್ ಪುಸ್ತಕವನ್ನು ವೆಬ್ಸೈಟ್: http://www.searchcoorg.com/booksನಲ್ಲಿ ಓದಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.