ADVERTISEMENT

ಅಸಂಘಟಿತ ಸಮಾಜ ಒಂದಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:04 IST
Last Updated 19 ಜುಲೈ 2013, 6:04 IST

ಮುಂಡರಗಿ: ತಾಲ್ಲೂಕಿನಲ್ಲಿ ಸೀಮಿತ ಜನಸಂಖ್ಯೆಯನ್ನು ಹೊಂದಿರುವ ಭಾವಸಾರ ಕ್ಷತ್ರಿಯ ಸಮುದಾಯದ ಜನರು ತಮ್ಮ ಇತಿಮಿತಿಯೊಳಗೆ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕೊಕೊಳ್ಳುತ್ತಾ ಸಮಾಜದ ಋಣವನ್ನು ತೀರಿಸುತ್ತಿರುವುದು ಶ್ಲಾಘನೀಯ ಎಂದು ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕು ಮಾತಾ ಹಿಂಗುಲಾಂಬಿಕಾ ದೇವಿ ಭಾವಸಾರ ಕ್ಷತ್ರಿಯ ಸಮುದಾಯ ಟ್ರಸ್ಟ್ ಕಮಿಟಿಯು ಸ್ಥಳೀಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಹಿಂಗುಲಾಂಬಿಕಾದೇವಿ ಜನ್ಮ ದಿನೋತ್ಸವ, ತೊಟ್ಟಿಲೋತ್ಸವ ಹಾಗೂ ಉಡಿ ತುಂಬುವ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಭಾವಸಾರ ಕ್ಷತ್ರಿಯ ಸಮುದಾಯದ ಜನರು ಸಾಕ್ಷರರಾಗಬೇಕು. ಆ ಮೂಲಕ ಸರಕಾರ ಹಾಗೂ ಸಮುದಾಯಗಳ ನೆರವು ಪಡೆದುಕೊಂಡು ಸಮಾಜವನ್ನು ಮುಂದೆ ತರಲು ಪ್ರಯತ್ನಿಸಬೇಕು. ಅಸಂಘಟಿತರಾಗಿರುವ ಸಮಾಜದ ಜನರೆಲ್ಲ ಒಂದಾಗಿ ಸರಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ ಜನಪರ ಕೆಲಸ ಕಾರ್ಯಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ವಿವಿಧ ಜಾತಿ, ಧರ್ಮ ಹಾಗೂ ಸಮಾಜಗಳು ಕೇವಲ ತಮ್ಮ ತಮ್ಮ ಧಾರ್ಮಿಕ ಆಚರಣೆಗಳಿಗೆ, ಉತ್ಸವಕ್ಕೆ ಮಾತ್ರ ಸೀಮಿತವಾಗದೆ, ಸಮಾಜಕ್ಕೆ, ಸಾರ್ವಜನಿಕರಿಗೆ, ಸಮುದಾಯಕ್ಕೆ ಏನನ್ನಾದರೂ ಒಳಿತು ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾವು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಇತರರನ್ನು ಸೇರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಪುರಸಭೆಯ ಮಾಜಿ ಉಪಾಧ್ಯಕ್ಷ ರಾಮು ಕಲಾಲ ಮಾತನಾಡಿ, ಯಾರಿಗೂ ಕೆಡುಕನ್ನು ಬಯಸದೇ ಸದಾ ತಮ್ಮ ಕಾಯಕದಲ್ಲಿ ತಲ್ಲಿನರಾಗುವ ಭಾವಸಾರ ಕ್ಷತ್ರಿಯ ಸಮಾಜವು ಇನ್ನುಳಿದ ಸಮಾಜಗಳಿಗೆ ಹಾಗೂ ಸಮುದಾಯಗಳಿಗೆ ಮಾದರಿಯಾಗಿದೆ. ಕಾಯಕಕ್ಕೆ ಮೊದಲ ಆಧ್ಯತೆ ನೀಡುವ ಮೂಲಕ ಸಮಾಜದ ಎಲ್ಲ ಜನರು ತಮ್ಮನ್ನು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಮಾತಾ ಹಿಂಗುಲಾಂಬಿಕಾ ದೇವಿ ಭಾವಸಾರ ಕ್ಷತ್ರಿಯ ಸಮುದಾಯ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಗಂಗಾಧರ ಹವಳೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅಖಿಲ ಭಾರತ ಎಬಿಬಿಕೆ ಅಧ್ಯಕ್ಷ ನಾರಾಯಣರಾವ್ ತಾತುಸ್ಕರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಾಗೇಶರಾವ ಮುಧೋಳಕರ, ಸತೀಶ ಬ್ರಾಡವೇ, ದೇವೆಂದ್ರಪ್ಪ ದಾಮೋದರ, ಸೋಮನಾಥ ಸೋನಗೋಜಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ರಾಮು ಕಲಾಲ, ಪುರಸಭೆ ಸದಸ್ಯ ಲಿಂಗನಗೌಡ ಪಾಟೀಲ, ಮುಖ್ಯಾಧಿಕಾರಿ ಆರ್.ಎಂ.ಪಾಟೀಲ  ಹಾಜರಿದ್ದರು.
ಮೊದಲು  ಭಾಜಾ ಭಜಂತ್ರಿ ಹಾಗೂ ಪೂರ್ಣಕುಂಭದೊಂದಿಗೆ ಮಾತಾ ಹಿಂಗುಲಾಂಬಿಕಾ ದೇವಿ ಭಾವಚಿತ್ರವನ್ನು  ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.