ರೋಣ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಭಾಗದ ಗ್ರಾಮಗಳಿಗೆ ಸಮರ್ಪಕವಾದ ನೀರು ಪೂರೈಸುವ ನಿಟ್ಟಿನಲ್ಲಿ ಮಲಪ್ರಭ ನದಿಯಿಂದ ನೀರನ್ನು ತರುವ ಬೃಹತ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ತಾವು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ದಾಗಿ ಶಾಸಕ ಬಿ.ಆರ್.ಯಾವಗಲ್ಲ ಹೇಳಿದರು.
ತಾಲ್ಲೂಕಿನ ಬೆಳವಣಕಿ ಗ್ರಾಮದ ಹತ್ತಿರ ಗುರುವಾರ ₹12.50 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಸಬ್ಮಿಷನ್ ಅನುದಾನದಡಿ ಅಸೂಟಿ ಹಾಗೂ ಇತರೆ 6 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಬಹುತೇಕ ಗ್ರಾಮಗಳು ಬರಪೀಡಿತ ಗ್ರಾಮಗಳಾಗಿದ್ದು ಬೇಸಿಗೆ ವೇಳೆ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿತ್ತು. ಗ್ರಾಮೀಣ ಭಾಗದ ಜನರ ಸಂಕಷ್ಟಗಳನ್ನು ಅರ್ಥೈಸಿಕೊಮಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಭಾಗದ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸುವ ಮೂಲಕ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
ರಾಜ್ಯ ಸರ್ಕಾರವು ಎಲ್ಲ ವರ್ಗದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಉತ್ತಮ ಯೋಜನೆಗಳನ್ನು ರೂಪಿಸಿದ್ದು ಜನರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹೊಳೆಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯನವರ ಆಡಳಿತದ ವೈಖರಿಯು ಕರ್ನಾಟಕವನ್ನು ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಮಾಡಿದೆ. ಹಸಿವು ಮುಕ್ತ ರಾಜ್ಯ , ಕೃಷಿ, ಉದ್ಯೋಗ, ಶಿಕ್ಷಣ, ಕೈಗಾರಿಕೋದ್ಯಮ, ವಿದೇಶಿ ಬಂಡವಾಳ ಹೂಡಿಕೆ, ಗ್ರಾಮಗಳ ಅಭಿವೃದ್ಧಿ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಮಾದರಿ ರಾಜ್ಯವಾಗಿದೆ ಎಂದರು.
ಎಸ್.ಎಚ್.ರಡ್ಡೇರ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಂಕರಗೌಡ ಪಾಟೀಲ, ಬಿ.ಎಸ್. ಶಲ್ಲಿಕೇರಿ, ಹನುಮಂತಪ್ಪ ಸೈದಾಪುರ, ಗದಿಗೆಪ್ಪ ತೆಗ್ಗಿನಕೇರಿ, ಸುಶೀಲಾಬಾಯಿ ಜಾಧವ, ಧರ್ಮಣ್ಣ ಬೂಸಗೌಡ್ರ, ರಾಜುಗೌಡ ಪಾಟೀಲ, ಬಸವರಾಜ ಬನಹಟ್ಟಿ, ರಾಜು ಶೆಟ್ರ, ಗಣೇಶ ಚಿಕ್ಕರಡ್ಡಿ, ದಾನಪ್ಪಗೌಡ್ರ, ವಿಜಯಕುಮಾರ ತೋಟರ, ಅನಿಲಕುಮಾರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.