ADVERTISEMENT

ಆರೋಗ್ಯಯುತ ಬದುಕಿಗೆ ಸ್ವಚ್ಛ ಪರಿಸರ ಅವಶ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:24 IST
Last Updated 25 ಡಿಸೆಂಬರ್ 2012, 6:24 IST

ಗಜೇಂದ್ರಗಡ: ಮನುಷ್ಯ ಆರೋಗ್ಯ ಯುತ ಬದುಕು ಸಾಗಿಸಬೇಕಾದರೆ, ಸಾಂಕ್ರಾಮಿಕ ಕಾಯಿಲೆಗಳಿಂದ ದೂರ ಉಳಿಯಬೇಕು. ಈ ಹಿನ್ನೆಲೆಯಲ್ಲಿ ಘನತ್ಯಾಜಗಳಿಗೆ ಪೂರ್ಣ ಪ್ರಮಾಣದಲ್ಲಿ ಮುಕ್ತಿ ನೀಡಲು ನಾಗರಿಕರು ಮುಂದಾಗ ಬೇಕು ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಚಳಗೇರಿ ಸಲಹೆ ನೀಡಿದರು.

ಘನ ತ್ಯಾಜ ವಸ್ತು ನಿರ್ವಹಣೆಯಲ್ಲಿ ಶಾಲಾ/ ಕಾಲೇಜು, ವಿದ್ಯಾರ್ಥಿಗಳ, ಶಿಕ್ಷಕರ, ಜನಪ್ರತಿನಿಧಿಗಳ ಮತ್ತು ಸಮುದಾಯದ ಪಾತ್ರ ಕುರಿತು ಇಲ್ಲಿನ ಎಸ್. ಎಂ. ಭೂಮರಡ್ಡಿ ಸಂಯಕ್ತ ಪದವಿ ಪೂರ್ವ ಕಾಲೇಜಿನಲ್ಲಿ  ಏರ್ಪ ಡಿಸಿದ್ದ `ಸ್ಪರ್ಧಾ ಪರೀಕ್ಷೆ'ಯಲ್ಲಿನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯನ ಆರೋಗ್ಯದ ಕುರಿತಾಗಿ ಸರ್ಕಾರ ರೂಪಿಸಿದ ಎಲ್ಲ ಕಾಕ್ರಮಗಳು ಯಶಸ್ವಿ ಯಾಗ ಬೇಕಾದರೆ ಜನತೆಯ ಪಾತ್ರ ಅತಿ ಮುಖ್ಯ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಮಲೇರಿಯಾ, ಮೆದುಳು ಜ್ವರ, ಡೆಂಗೆ ಮತ್ತು ಚಿಕುನ್ ಗುನ್ಯಾ ಹಾಗೂ ಆನೆ ಕಾಲು ರೋಗಗಳನ್ನು ತಡೆಗಟ್ಟಲು ನಾಗರಿಕರ ಪಾತ್ರ ಅತ್ಯಂತ ಮಹತ್ವದಾಗಿದೆ. ಆದರಿಂದ ಜನತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಜೈವಿಕ ನಿಯಂತ್ರಣ ವಿಧಾನವು ಅತಿ ಸರಳವಾದ, ಅಗ್ಗವಾದ ಮತ್ತು ಶಾಶ್ವತವಾಗಿ ಬಳಸಬಹುದಾದ ಸುಲಭ ವಿಧಾನ. ಇದು ಪರಿಸರಕ್ಕೆ ಹೊಂದಿ ಕೊಳ್ಳುವ `ಹಾನಿ ರಹಿತ' ವಿಧಾನ ವಾಗಿದೆ. ನಮ್ಮ ದೇಶದಲ್ಲಿ ಹಲವಾರು ಜಾತಿಯ ಲಾರ್ವಾಹಾರಿ ಮೀನುಗಳಿದ್ದು ಅವುಗಳ್ಲಿ ಮುಖ್ಯವಾಗಿ ಕೆಲವು ಜಾತಿಯ ಮೀನುಗಳು ಹೆಚ್ಚಾಗಿ ಸೊಳ್ಳೆ ಮರಿಗಳನ್ನು ತಿನ್ನುವುದರಿಂದ ಮತ್ತು ಅವುಗಳ ವಿಶೇಷ ಗುಣಗಳಿಂದ ಸೊಳ್ಳೆ ನಿಯಂತ್ರಣಕ್ಕೆ ಬಳಸಲಾಗುತ್ತಿದೆ ಎಂದರು.

ಮನೆಯೊಳಗಿನ ಮತ್ತು ಮೇಲ್ಛಾ ವಣಿಯ ನೀರಿನ ತೊಟ್ಟಿಗಳನ್ನು ತಪ್ಪದೇ ವಾರಕ್ಕೊಮ್ಮೆ ನೀರನ್ನು ಖಾಲಿಮಾಡಿ, ಉಜ್ಜಿ ಒಗಿಸಿ ಮತ್ತೆ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚು ವುದು. ಇದರಿಂದ ಸೊಳ್ಳೆಗಳ ಲಾರ್ವಾ ಉತ್ಪತ್ತಿ ನಿಯಂತ್ರಿಸಬಹುದು. ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನಿಂತ ನೀರಿಗೆ ಸೀಮೆ ಎಣ್ಣೆ ಸುಟ್ಟ ಎಣ್ಣೆ ಹಾಕಿ ಲಾರ್ವಾ ಉತ್ಪತ್ತಿ ತಡೆಯಬಹುದು ಎಂದರು.

ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಹಿರಿಯ ಉಪನ್ಯಾಸಕ ಬಿ.ಎ. ಕೆಂಚರೆಡ್ಡಿ, ವೈ .ಎ.ತೋಟಗಂಟಿ ಬಸವರಾಜ ಮುನವಳ್ಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.