ADVERTISEMENT

ಉತ್ತಮ ಫಸಲು ನಿರೀಕ್ಷೆ...!

ಮೇವಿನ ಬರ ನೀಗಿಸಿದ ಜೋಳ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 6:14 IST
Last Updated 8 ಜನವರಿ 2013, 6:14 IST
ಲಕ್ಷ್ಮೇಶ್ವರ ಸುತ್ತಮುತ್ತಲಿನ ಹೊಲಗಳಲ್ಲಿ ತೆನೆ ಬಿಟ್ಟು ಬಿಳಿಜೋಳ ತೂಗಾಡುತ್ತಿದೆ.
ಲಕ್ಷ್ಮೇಶ್ವರ ಸುತ್ತಮುತ್ತಲಿನ ಹೊಲಗಳಲ್ಲಿ ತೆನೆ ಬಿಟ್ಟು ಬಿಳಿಜೋಳ ತೂಗಾಡುತ್ತಿದೆ.   

ಲಕ್ಷ್ಮೇಶ್ವರ: ತಾಲ್ಲೂಕಿನ ಆಹಾರ ಬೆಳೆಗಳಲ್ಲಿ ಜೋಳ ಪ್ರಮುಖವಾಗಿದ್ದು ಎಲ್ಲರ ಹೊಟ್ಟೆ ತುಂಬಿಸುವುದರ ಜೊತೆಗೆ ರೈತರ ಜಾನುವಾರುಗಳ ಹೊಟ್ಟೆಯನ್ನು ತುಂಬಿಸುವ ಸೌಭಾಗ್ಯದ ಬೆಳೆಯಾಗಿದೆ. ಆದರೆ, ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿರುವುದರಿಂದ  ಕಳೆದ ಒಂದೆರಡು ದಶಕಗಳಿಂದ ಜೋಳ ಬೆಳೆಯುವುದನ್ನೇ ಕಡಿಮೆ ಮಾಡಿದ್ದರು. ಹೀಗಾಗಿ ಜೋಳದ ಬೆಲೆ ಗಗನಕ್ಕೆ ಏರುವುದರ ಜೊತೆಗೆ ದನಕರುಗಳ ಮೇವಿಗೆ ಬರ ಬಡಿದು ರೈತರನ್ನು ಸಂಕಷ್ಟಕ್ಕೆ ಈಡು ಮಾಡಿತ್ತು.   

ಹೀಗಾಗಿ, ಇತ್ತೀಚಿನ ದಿನಗಳಲ್ಲಿ ರೈತರು ಜೋಳಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಆದರೆ, ಮಳೆರಾಯನ ಕಣ್ಣಾಮುಚ್ಚಾಲೆಯಿಂದಾಗಿ ಜೋಳ ಚೆನ್ನಾಗಿ ಬೆಳೆಯುತ್ತಿಲ್ಲ ಎಂಬ ಕೊರಗು ರೈತರದು. ಇದು ನಿಜ ಕೂಡ. ಈ ಬಾರಿಯೂ ಮುಂಗಾರು, ಹಿಂಗಾರು ಎರಡೂ ಮಳೆಗಳೂ ಕೈಕೊಟ್ಟು ತಾಲ್ಲೂಕಿನಲ್ಲಿ ಭೀಕರ ಬರಗಾಲ ಆವರಿಸಿ ರೈತರೆಲ್ಲ ಕಂಗಾಲಾಗಿದ್ದರು.

ಕಳೆದ ಬಾರಿಯೂ ಬರಗಾಲದ ಬವಣೆಯಿಂದಾಗಿ ಜಾನು ವಾರುಗಳಿಗೆ  ಮೇವು ಸಿಗದೆ ಕೈಗೆ ಬಂದ ಬೆಲೆಗೆ ರೈತರು ದನಕರುಗಳನ್ನು ಮಾರಾಟ ಮಾಡಿದ್ದರು.

ಆದರೆ, ಪ್ರಸ್ತುತ ವರ್ಷ ಆಕಸ್ಮಿಕವಾಗಿ ಬೀಸಿದ ನೀಲಂ ಚಂಡಮಾರುತದ ಪ್ರಭಾವದಿಂದಾಗಿ ತಾಲ್ಲೂ ಕಿನಲ್ಲಿ ಹಿಂಗಾರು ಮಳೆ ಸ್ವಲ್ಪ ಉತ್ತಮವಾಗಿ ಸುರಿದ ಪರಿಣಾಮ ಹಿಂಗಾರು ಹಂಗಾಮಿಗಾಗಿ ರೈತರು ಬಿಳಿಜೋಳ ಬಿತ್ತನೆ ಮಾಡಿದ್ದರು. ಹಿಂಗಾರು ಹಂಗಾಮಿನ ಬೆಳೆಗಳಿಗೆ ಒಮ್ಮೆ ಮಳೆಯಾದರೆ ಸಾಕು.

ನಂತರ ಡಿಸೆಂಬರ್, ಜನವರಿ ಚಳಿಗೆ ಚೆನ್ನಾಗಿ ಬೆಳೆ ಯುತ್ತವೆ. ಈ ಸಲ ಜೋಳ ಚೆನ್ನಾಗಿ ಬೆಳೆದಿದ್ದು ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಇದ್ದಾರೆ. ಜೋಳ ಬೆಳೆದರೆ ಹೊಟ್ಟೆಗೆ ಹಿಟ್ಟು ಸಿಗುವುದರ ಜೊತೆಗೆ ದನಕರುಗಳಿಗೆ  ಮೇವು ದೊರೆಯುತ್ತದೆ ಎಂಬ ಕಳಕಳಿಯಿಂದ ರೈತರು ಜೋಳ ಬಿತ್ತನೆ ಮಾಡುತ್ತಾರೆ.

ರೈತ ಪಟ್ಟ ಕಷ್ಟ ಈ ವರ್ಷ ವ್ಯರ್ಥವಾಗಲಿಲ್ಲ. ಬಿತ್ತನೆ ಮಾಡಿದ ಎಲ್ಲ ಹೊಲಗಳಲ್ಲಿ ಆಳೆತ್ತರಕ್ಕೆ ಬೆಳೆದ ಜೋಳ ದೊಡ್ಡ ದೊಡ್ಡ ತೆನೆ ಬಿಟ್ಟಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಪ್ರಸ್ತುತ ವರ್ಷ ತಾಲ್ಲೂಕಿನ 14,290 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬಿತ್ತನೆ ಆಗಿದ್ದು ಜೋಳ ಈಗ ಕಾಳು ಕಟ್ಟಿದ್ದು ಇನ್ನೊಂದು ತಿಂಗಳಲ್ಲಿ ಕೊಯ್ಲಿಗೆ ಬರಲಿದೆ.  ಈ ಹಿನ್ನೆಲೆಯಲ್ಲಿ ರೈತರು ಈಚೆಗೆ ಜೋಳಕ್ಕೆ ಮತ್ತೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.