ADVERTISEMENT

ಕಡಲೆ ಮಾರಿದ ಹಣ ಬರದೇ ಕಂಗಾಲು

ಯಳವತ್ತಿ ಗ್ರಾಮದಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 8:52 IST
Last Updated 5 ಏಪ್ರಿಲ್ 2018, 8:52 IST

ಲಕ್ಷ್ಮೇಶ್ವರ: ಸರ್ಕಾರ ಕಡಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ, ಅಡರಕಟ್ಟಿ ಹಾಗೂ ಯಳವತ್ತಿ ಗ್ರಾಮಗಳಲ್ಲಿ ಖರೀದಿ ಕೇಂದ್ರಗಳನ್ನೂ ತೆರೆದಿದೆ. ಕಳೆದ ಒಂದು ತಿಂಗಳಿಂದ ಖರೀದಿ ಭರದಿಂದ ಸಾಗಿದ್ದು ಈಗಾಗಲೆ ನೂರಾರು ರೈತರು ಸಾವಿರಾರು ಕ್ವಿಂಟಲ್ ಫಸಲನ್ನು ಮಾರಾಟ ಮಾಡಿದ್ದಾರೆ.‘ಈ ಬಾರಿ ಹಿಂಗಾರು ಮಳೆ ಸ್ವಲ್ಪ ಉತ್ತಮ ಆಗಿದ್ದರಿಂದ ಕಡಲೆ ಚೆನ್ನಾಗಿ ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದೆ ರೈತರು ಕಂಗಾಲಾಗಿ ಬೆಂಬಲ ಬೆಲೆಯಲ್ಲಿ ಸರ್ಕಾರವೇ ಖರೀದಿ ಮಾಡಬೇಕು’ ಎಂದು ರೈತರು ಹೋರಾಟ ನಡೆಸಿದ್ದರು.ಕೊನೆಗೂ ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸರ್ಕಾರ ಕಡಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಹೀಗಾಗಿ ಮೂರೂ ಕೇಂದ್ರಗಳಲ್ಲಿ ರೈತರು ಕಡಲೆ ಮಾರಾಟ ಮಾಡುತ್ತಿದ್ದಾರೆ.

ಬಾರದ ಹಣ: ರೈತರು ಕಡಲೆ ಮಾರಾಟ ಮಾಡಿ ತಿಂಗಳಾದರೂ ರೈತರಿಗೆ ಹಣ ಪಾವತಿ ಆಗಿಲ್ಲ. ಹೀಗಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ರೈತರ ಪರಿಸ್ಥಿತಿ.‘ರೈತರು ಸಾಲ ಮಾಡಿ ಬೆಳೆ ಬೆಳೆಯುತ್ತಾರೆ. ಆದರೆ ಸೂಕ್ತ ಸಮಯದಲ್ಲಿ ಸೂಕ್ತ ಬೆಲೆ ಸಿಗದೆ ಅವರು ಕಂಗಾಲಾಗುತ್ತಾರೆ. ನಮ್ಮ ಕಷ್ಟ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ. ಆದಷ್ಟು ಲಗೂನ ಕಡ್ಲಿ ರೊಕ್ಕ ಕೊಡಬೇಕು’ ಎಂದು ರೈತರು ಒತ್ತಾಯಿಸಿದರು.

**

ADVERTISEMENT

‘ಮಾಲು ಮಾರಿ ತಿಂಗಳಾದರೂ ಇನ್ನೂ ರೊಕ್ಕ ಬಂದಿಲ್ಲ. ಹಿಂಗಾದರ ನಾವು ಜೀವನಾ ಮಾಡದ ಹ್ಯಂಗ್ರೀ’ – ಭರಮನಗೌಡ, ರೈತ, ಯಳವತ್ತಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.