ADVERTISEMENT

`ಕಳಸಾಬಂಡೂರಿ ಹಿನ್ನಡೆಗೆ ಕಾಂಗ್ರೆಸ್ ಕಾರಣ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:25 IST
Last Updated 23 ಏಪ್ರಿಲ್ 2013, 9:25 IST

ನರಗುಂದ: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರಕಾರ ಹೆಚ್ಚಿನ ಅಭಿವೃದ್ಧಿ ಸಾಧಿಸುವ ಮೂಲಕ ನೀರಾವರಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿದೆ. ಕಳಸಾ ಬಂಡೂರಿಗೆ ಚಾಲನೆ ನೀಡಿ ಕಾಮಗಾರಿ ನಡೆಯುತ್ತಿದೆ. ಆದರೆ ಅದರ ಹಿನ್ನಡೆಗೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವೇ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್  ಆರೋಪಿಸಿದರು.

ಪಟ್ಟಣದ ಗಾಂಧಿಚೌಕ್‌ನಲ್ಲಿ ಸೋಮವಾರ ನಡೆದ  ಬಿಜೆಪಿ  ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಳಸಾ ಬಂಡೂರಿ ಕಾಮಗಾರಿ ಆರಂಭವಾಗಿದೆ. ನಮ್ಮ ಸರಕಾರ ಅದಕ್ಕಾಗಿ 100  ಕೋಟಿ ಮೀಸಲಿಡುವ ಮೂಲಕ ಅದನ್ನು ಜಾರಿಗೊಳಿಸಲು  ಪಣತೊಟ್ಟು ನಿಂತಿದೆ. ಆದರೆ ಅದಕ್ಕೆ ಕೇಂದ್ರ ಸರಕಾರದ ಪರಿಸರ ಇಲಾಖೆ ಅನುಮತಿ ನೀಡುತ್ತಿಲ್ಲ ಎಂದರು.

ಕಳಸಾಬಂಡೂರಿ  ಬಗ್ಗೆ ಮಾತನಾಡುವ  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನ  ಹಣಕಾಸು ಸಚಿವರಾಗಿದ್ದಾಗ ನಾನು, ಸಚಿವ ಬೊಮ್ಮಾ ಯಿವರು ಇದಕ್ಕೆ ಹಣ ಮೀಸಲಿಡಲು ಕೋರಿದಾಗ ಯಾವ ಕಳಸಾ ಬಂಡೂರಿ ಎಂದು ವ್ಯಂಗ್ಯ ವಾಡಿದ್ದರು. ಆದರೆ ಈಗ ಅದರ ಬಗ್ಗೆ ಮಾತನಾಡುವುದು ಎಷ್ಟೊಂದು ಸರಿ ? ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ ಎಂದರು. 

ಸಿದ್ದರಾಮಯ್ಯನವರಿಗೆ ನಿಜವಾದ ಕಳಕಳಿ  ಇದ್ದರೆ  ಕೂಡಲೇ ಕೇಂದ್ರ ಸರಕಾರದ ಹತ್ತಿರ ಹೋಗಿ ತಮ್ಮ  ಕಾಂಗ್ರೆಸ್ ನಾಯಕರ ಮನ ವೊಲಿ ಸಲಿ ಎಂದು  ಶೆಟ್ಟರ್  ಸವಾಲು ಹಾಕಿದರು. ಟೀಕಿಸುವುದನ್ನೇ ಗುರಿ ಮಾಡಿಕೊಂಡಿರುವ ಕಾಂಗ್ರೆಸ್‌ನಲ್ಲಿ ನಾಯಕರೇ ಇಲ್ಲದೇ ಸಿಎಂ ಹೆಸರು ಘೋಷಣೆ ಮಾಡದಂತಹ  ಸ್ಥಿತಿ ಎದುರಾಗಿದೆ. ಆದರೆ ಬಿಜೆಪಿ ಈಗಾಲೇ ಮುಖ್ಯಮಂತ್ರಿ ಘೋಷಣೆ ಆಗಿದೆ ಎಂದು ಟೀಕಿಸಿದರು. 

ಬಿಜೆಪಿ ಸರಕಾರ ಭಾಗ್ಯಲಕ್ಷ್ಮಿ ಬಾಂಡ್, ಉಚಿತ ಸೈಕಲ್, ಗ್ರಾಮೀಣ ರಸ್ತೆಗಳ  ಸುಧಾರಣೆ ಸೇರಿ ದಂತೆ ಅನೇಕ ಅಭಿವೃದ್ಧಿ  ಯೋಜನೆ ಜಾರಿ ಗೊಳಿ ಸಿದೆ. ನರಗುಂದ ಮತಕ್ಷೇತ್ರದಲ್ಲಿ  ಶಾಸಕ ಸಿ.ಸಿ. ಪಾಟೀಲರು ನೂರಾರು ಕೋಟಿ ರೂಪಾ ಯಿಗಳ ಮೂಲಕ  ಸಾಕಷ್ಟು ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಕೈಗೊಂಡ್ದ್ದಿದಾರೆ. ಆದ್ದರಿಂದ ಅವರಿಗೆ ಮತ್ತೊಮ್ಮೆ ಮತ ನೀಡುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು  ಸಿಎಂ ಶೆಟ್ಟರ್ ಕೋರಿದರು. 

ವಿಡಿಯೊ ಮೂಲಕ ಶಾಸಕ ಪಾಟೀಲ : ಬಹಿರಂಗ ಸಭೆಯಲ್ಲಿಯೇ  ಬೆಂಗಳೂ ರಿನಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಶಾಸಕ ಸಿ.ಸಿ.ಪಾಟೀಲರು ವಿಡಿಯೊ ಸಂವಾದದ ಮೂಲಕ  ಸಿಎಂ ಶೆಟ್ಟರ ಜೊತೆ ದೂರವಾಣಿ ಮೂಲಕ ಮಾತನಾಡಿ ನೆರೆದ ಜನರಲ್ಲಿ ನನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಮತ ನೀಡಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರಿಗೌಡ್ರ ಮಾತನಾಡಿದರು.  ಸಭೆಯಲ್ಲಿ  ಸಚಿವ ಕಳಕಪ್ಪ ಬಂಡಿ, ಶಾಸಕರ ಪತ್ನಿ ಶೋಭಾ ಪಾಟೀಲ, ಉಮೇಶಗೌಡ ಪಾಟೀಲ, ಜಿಪಂ ಅಧ್ಯಕ್ಷ ಎಂ.ಎಸ್‌ಪಾಟೀಲ, ಚಂದ್ರು ಪವಾರ, ಎಂ.ಬಿ. ಜ್ಞಾನೋ ಪಂಥ, ರಾಜುಗೌಡ ಪಾಟೀಲ, ಜಿ.ಬಿ .ಕುಲಕರ್ಣಿ, ಎನ್.ಬಿ.ಗಾಡಿ, ಚಂದ್ರು ದಂಡಿನ, ವಸಂತ ಜೋಗಣ್ಣವರ, ಬಿ.ಕೆ.ಗುಜಮಾಗಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.