ADVERTISEMENT

ಕಳಸಾ ಬಂಡೂರಿ: ಭಿಕ್ಷೆ ಬೇಡಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:15 IST
Last Updated 11 ಫೆಬ್ರುವರಿ 2012, 5:15 IST

ನರಗುಂದ: ಕಳಸಾ ಬಂಡೂರಿ ಕಾಮಗಾರಿ ಆರಂಭವಾಗಿ ಐದು ವರ್ಷ ಗತಿಸಿದರೂ ಕಾಮಗಾರಿ ಮುಗಿದಿಲ್ಲ ಎಂದು ದೂರಿದ ಕಳಸಾ ಬಂಡೂರಿ ಹೋರಾಟ ಕೇಂದ್ರ ಸಮಿತಿ ಸದಸ್ಯರು, ಪಟ್ಟಣದಲ್ಲಿ ಶುಕ್ರವಾರ ಭಿಕ್ಷಾಟನೆ ಮಾಡಿ ಪ್ರತಿಭಟನೆ ನಡೆಸಿದರು.

ಪುರಸಭೆ ಆವರಣದ ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮುಖ್ಯ ಪ್ರದೇಶಗಳ ಮೂಲಕ ಸಾಗಿತು.

ಮಾರುಕಟ್ಟೆ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತ ಸರಕಾರದ ವಿರುದ್ಧ  ಘೋಷಣೆ ಕೂಗಿದ ಪ್ರತಿಭಟನಾಕಾರರು ನೀರು ಕೊಡಿ ಎಂದು  ಅಂಗ ಲಾಚಿದರು.

ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ ಎ.ಎಚ್.ಬದಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯ ಕುಲಕರ್ಣಿ, `ಸರಕಾರ  ಕೇವಲ ನೆಪಕ್ಕೋಸ್ಕರ ಕಳಸಾ  ಬಂಡೂರಿ ಕಾಮಗಾರಿಗೆ ಅಡಿಗಲ್ಲು ಹಾಕಿದೆ.  ಈಗ  ಕೇಂದ್ರ ಸರಕಾರದ ಕಡೆಗೆ  ಬೊಟ್ಟು ಮಾಡಿ ತೋರಿಸುತ್ತಿದೆ. ಅತ್ತ ಕೇಂದ್ರ ರಾಜ್ಯದ ಮೇಲೆ ಬೊಟ್ಟು ಮಾಡಿ ತೋರಿಸುತ್ತಿದೆ~ ಎಂದು ಆರೋಪಿಸಿದರು.

`ಖುರ್ಚಿಗಾಗಿ ಕಚ್ಚಾಡುವ ರಾಜಕಾರಣಿಗಳು ಕಳಸಾ ಬಂಡೂರಿ ಬಗ್ಗೆ  ಚರ್ಚೆ ನಡೆಸುತ್ತಿಲ್ಲ. ಹಣ ಇಲ್ಲವಾದರೆ  ನಾವೇ ಈಗ ಭಿಕ್ಷೆ ಬೇಡುತ್ತಿದ್ದು ಅದರ ಮೂಲಕವಾದರೂ ಕಳಸಾ ಬಂಡೂರಿ ಕಾಮಗಾರಿ ಆರಂಭಿಸಿ ಪುಣ್ಯ ಕಟ್ಟಿಕೊಳ್ಳಿ~ ಎಂದು  ಅವರು ಹೇಳಿದರು.

ನವಿಲುತೀರ್ಥ ಜಲಾಶಯದಿಂದ ಮಲಪ್ರಭೆ ಕಾಲುವೆಗಳಿಗೆ  ನೀರು ಹರಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಕಾಲುವೆ ಹೂಳೆತ್ತದೆ ಬೇಕಾಬಿಟ್ಟಿ ನೀರು  ಹರಿಸುತ್ತಿದ್ದಾರೆ. 13 ಟಿಂಎಂಸಿ ನೀರು   ಪೋಲಾಗಲು ಕಾರಣರಾಗಿದ್ದಾರೆ. ಈ ಕುರಿತು ಸಿಓಡಿ ತನಿಖೆ ನಡೆಯಬೇಕು ಎಂದು ಅವರ ಸರಕಾರವನ್ನು ಒತ್ತಾಯಿಸಿದರು.

ಬಸನಗೌಡ ಚಿಕ್ಕನಗೌಡ್ರ,  ಮಗುತಮಸಾಬ ಪಠಾಣ,  ಶರಣಪ್ಪ ಶಿತೋಳೆ, ಅಶೋಕ ಹಾದಿಮನಿ, ದೇವರಾವ್ ರೇವಡೆ  ಅಲ್ಲಿಸಾಬ ನದಾಫ್, ಚಳ್ಳಪ್ಪ ನಾಯ್ಕರ, ಶಂಕರಗೌಡ್ರ ವೀರನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.