ADVERTISEMENT

ಕಾಮರತಿಗೆ ರೂ 2.80 ಕೋಟಿ ಬಂಗಾರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

 ಗದಗ: ‘ಸರ್ಕಾರಿ ಕಾಮಣ್ಣ’ ಎಂದೇ ಪ್ರಸಿದ್ಧಿ ಪಡೆದಿರುವ ಕಿಲ್ಲಾ ಓಣಿಯ ಕಾಮರತಿಯರ ಮೆರವಣಿಗೆ ಬುಧವಾರ ನಗರದ ಪ್ರಮುಖ ಬೀದಿಗಳಲ್ಲಿ ರಂಗುರಂಗಿನಿಂದ ನಡೆಯಿತು.ಸ್ಥಳೀಯ ನಿವಾಸಿಗಳು ರತಿದೇವಿಗೆ ತಮ್ಮ ಬಂಗಾರದ ಆಭರಣಗಳನ್ನು ತಂದು ಹಾಕಿದ್ದರು. ಮಹಿಳೆಯರು ತಮ್ಮ ಟೀಕಿ, ತಾಳಿ ಸರಾ, ಬಾಜುಬಂದ್ ಸೆಟ್, ಚಪ್ಪಲಾರ, ಕಿವಿಯೋಲೆ, ಚೈನ್, ಸರಾ ಸೇರಿದಂತೆ ಇತರ ಆಭರಣಗಳನ್ನು ತಂದು ರತಿದೇವಿಗೆ ಅಲಂಕರಿಸಿದ್ದರು. ಭಕ್ತರು ನೀಡಿದ ಆಭರಣ ಸರಿಸುಮಾರು 20 ಕೆ.ಜಿ.ಯಷ್ಟು ಇತ್ತು.

ಇದರ ಮೌಲ್ಯ ಸುಮಾರು 2.80 ಕೋಟಿ ರೂ  ಎನ್ನುವುದು ಕಿಲ್ಲಾ ಓಣಿಯ ಹಿರಿಯರ ಅಭಿಪ್ರಾಯ.ಕಿಲ್ಲಾ ಓಣಿಯಿಂದ ಸರ್ವಾಲಂಕಾರ ಭೂಷಿತರಾಗಿ ಮೆರವಣಿಗೆ ಹೊರಟ ಕಾಮರತಿಯರು, ಜುಮ್ಮಾ ಮಸೀದಿ, ಹನುಮನ ಗರಡಿ, ಮಾರ್ಕೆಟ್ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಯಲ್ಲಿ ಸಂಚಾರ ಮಾಡಿದರು. ಈ ಸಂಚಾರ ಮುಗಿದಾಗ ತಡರಾತ್ರಿಯಾಗಿತ್ತು.

ಕಾಮರತಿಯರನ್ನು ಪ್ರತಿಷ್ಠಾಪನೆ ಮಾಡಲಾಗಿದ್ದ ಗಾಡಿಯ ಮುಂದೆ ಸಾವಿರಾರು ಜನರು ರಂಗು-ರಂಗಿನ ಬಣ್ಣ ಬಳಿದುಕೊಂಡು ಕುಣಿದು-ಕುಪ್ಪಳಿಸಿದರು. ಜಗ್ಗಲಿಗೆ ತಂಡ ಇವರಿಗೆ ಸಾಥ್ ನೀಡಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT