ಗದಗ: ‘ಬಾನುಲಿಗೆ ರೂಪಕ, ನಾಟಕ, ಕೃಷಿರಂಗ, ಗಿಳಿವಿಂಡು ಮೊದಲಾದ ಎಲ್ಲ ಶಾಖೆಗಳಲ್ಲೂ ಗ್ರಾಮೀಣ ಸೊಗಡು ಬಿಂಬಿಸಿದ್ದಲ್ಲದೆ ದೂರದರ್ಶನಗಳ ಲ್ಲಿಯೂ ಸಾಕ್ಷ್ಯಚಿತ್ರ ಮೂಲಕ ಪ್ರತಿಭೆ ಪ್ರದರ್ಶಿಸಿದವರು ಬಸವರಾಜ ಗಣಪ್ಪ ನವರ’ ಎಂದು ಸಾಹಿತಿ ಡಾ.ಶೇಖರ ಲದವಾ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲಾ ವಿದ ಬಸವರಾಜ ಗಣಪ್ಪನವರ ಸಾಹಿತ್ಯ ಮತ್ತು ಕಿರುಚಿತ್ರಗಳ ಅವಲೋಕನ ಕುರಿತು ಉಪನ್ಯಾಸ ನೀಡಿದ ಅವರು, ಗಣಪ್ಪನವರ ಬಾಲ್ಯದಿಂದಲೇ ಕಲೆ, ಸಾಹಿತ್ಯದ ಗೀಳು ಹೊಂದಿದ್ದರು.
ಪತ್ರಿಕೆ, ಬಾನುಲಿಗಳಲ್ಲಿ ಲೇಖನ, ರೂಪಕ, ನಾಟಕ, ಕೃಷಿಗೆ ಸಂಬಂಧಿಸಿದ ವಿಷಯ ಗಳ ಮೂಲಕ ಬರವಣಿಗೆ ರೂಢಿಸಿ ಕೊಂಡರು. ದೂರದರ್ಶನದ ಚಂದನ ದಲ್ಲಿ ಹಲವು ಸಾಕ್ಷ್ಯಚಿತ್ರಗಳ ಮೂಲಕ ಪ್ರತಿಭೆ ಪ್ರದರ್ಶಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ಡಾ.ಶಿವಣ್ಣ ಕುರಿ, ಬಸವರಾಜ ಗಣಪ್ಪನವರ ಅವರು ಕಿರುಚಿತ್ರಗಳಲ್ಲಿ ಡಂಬಳ, ಗದಗ, ಕಪ್ಪತ್ತಗುಡ್ಡದ ಪರಿಸರ ಹಾಗೂ ಸ್ಥಳೀಯ ಪ್ರತಿಭೆಗಳನ್ನು ಬೆಳಗುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನಂತರ, ಬಸವರಾಜ ಗಣಪ್ಪನವರ ‘ಯಕ್ಕಾ ಹಂಚು’, ‘ಅಚ್ಚ ಕನ್ನಡ’, ‘ಕೆಂಪು ರಣರಂಗ’, ‘ಬ್ಯಾಡಗಿ ಮೆಣಸಿನಕಾಯಿ’, ‘ಒಂದ್ ಗಂಟೆ ಬಿಟ್ಕೊಂಡ್ ಬಾ’, ‘ಬೆನ್ನಮ್ಯಾಲ ಬರಿಲೇನ್ರಿ’, ಯುಗಾದಿ ಕುರಿತ ಸಾಕ್ಷಚಿತ್ರ ಮತ್ತು ಕಿರುಚಿತ್ರಗಳ ಪ್ರದರ್ಶನ ಜರುಗಿತು. ಬಾಲನಟ ಅವಿನಾಶ ಗಂಜಿಹಾಳ ಚಿತ್ರನಟರ ಮಿಮಿಕ್ರಿ ಮಾಡಿ ಸಾಹಿತ್ಯಾ ಭಿಮಾನಿಗಳನ್ನು ರಂಜಿಸಿದರು.
ಸಾಹಿತಿಗಳಾದ ಪ್ರೊ.ಕೆ.ಎಚ್. ಬೇಲೂರ, ಪ್ರೊ.ಶಶಿಕಾಂತ ಕೊರ್ಲಹಳ್ಳಿ, ಕೆ.ವಿ.ಕುಂದಗೋಳ, ರತ್ನಕ್ಕ ಬ ಪಾಟೀಲ, ಆರ್.ಎಲ್.ಖ್ಯಾಡದ, ಬಸವಣ್ಣ ಅಂಗಡಿ, ಶರಣಬಸಪ್ಪ ಸಂ ಅಂಗಡಿ, ಆರ್.ಡಿ. ಕಪ್ಪಲಿ, ಸಿ.ಆರ್.ಗಡಾದ, ಶಂಕ್ರಪ್ಪ ತೊಂಡಿಹಾಳ, ಪಿ.ಟಿ.ನಾರಾಯಣಪೂರ, ಶಂಕ್ರಣ್ಣ ದೊಡ್ಡಣ್ಣವರ, ಆರ್.ಎಚ್.ಬಿ. ರಾಘವೇಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.