ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:15 IST
Last Updated 25 ಫೆಬ್ರುವರಿ 2012, 10:15 IST

ಗದಗ: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ನಗರದ ಕುಷ್ಟಗಿಚಾಳದ ನೆಹರು ಯುವಕ ಮಂಡಳದ ನೇತತ್ವದಲ್ಲಿ ಅಲ್ಲಿನ ನಿವಾಸಿಗಳು ಗುರುವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕುಷ್ಟಗಿಚಾಳ ಪ್ರದೇಶವು ಮೂಲ ಸೌಲಭ್ಯದಿಂದ ವಂಚಿತವಾಗಿದೆ. ಈ ಕುರಿತು ನಗರಸಭೆ ಆಡಳಿತಕ್ಕೆ  ಸಾಕಷ್ಟು ಸಲ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸದ್ಯ ಕುಡಿಯುವ ನೀರಿನ ಪೂರೈಕೆ ಇಲ್ಲದೇ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಫೆಬ್ರುವರಿ ಮಧ್ಯಭಾಗದಲ್ಲಿಯೇ ಈ ಪರಿಸ್ಥಿತಿ ನಿರ್ಮಾಣವಾದರೆ ಮುಂದೆ ಏಪ್ರಿಲ್, ಮೇ ತಿಂಗಳುಗಳಲ್ಲಿ ಯಾವ ರೀತಿ ತೊಂದರೆಯಾಗಲಿದೆ.

ನೀರಿನ ತೊಂದರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಯಾವುದೇ ಜವಾಬ್ದಾರಿ ಇಲ್ಲ. ಜನರ ಮನವಿ, ವಿನಂತಿ, ಕೂಗು ಅವರ ಕಿವಿಗೆ ಕೇಳಿಸುತ್ತಿಲ್ಲ. ಅವರೆಲ್ಲ ಕಿವುಡರಾಗಿದ್ದರೆ. ಹೀಗಾಗಿ ಅವರಿಗೆ ಕೇಳಿಸಲೆಂದೇ ಜೋರು ಧ್ವನಿಯಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದೇವೆ ಎಂದ ಪ್ರತಿಭಟನಾಕಾರರು ಬಾಯಿ ಬಡಿದುಕೊಂಡು ಕೂಗಿದರು.

ಅವಳಿ ನಗರದಲ್ಲಿ 15-20 ದಿನಗಳಾದರೂ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. 2ನೇ ಹಂತದ ಕುಡಿಯುವ ನೀರಿನ ಯೋಜನೆ ಬರೀ ಜನಪ್ರತಿನಿಧಿಗಳ ಪ್ರಚಾರದ ಸರಕಾಗಿದೆ. ಕುಷ್ಟಗಿ ಚಾಳದಲ್ಲಿ ಕುಡಿಯುವ ನೀರಿನ ಜೊತೆಗೆ ಚರಂಡಿ ಸ್ವಚ್ಛತೆ ಎನ್ನುವುದು ಗಗನ ಕುಸುಮವಾಗಿದೆ. ಶೌಚಾಲಯವಿಲ್ಲದೇ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಲ್ತಾಫಹುಸೇನ ಪರದೇವಾಲಿ, ಜಾವೇದಸಾಬ ನೂರಬಾಷಾ, ಪವನ ನವಲೇಕರ, ಜಿ.ಆರ್.ಜೋಶಿ, ರಮೇಶ ಮಡಿವಾಳರ, ಅಶೋಕ ವಡ್ಡರಕಲ್ಲ, ದೀಲಿಪ ಮ್ಯೋಗೇರಿ, ರೇಣುಕಮ್ಮ, ಬೊರಮ್ಮ ಸೇರಿದಂತೆ ಕುಷ್ಟಗಿಚಾಳದ ನಾಗರಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.