ADVERTISEMENT

ಕೊನೆಗೂ ಬಂದ ತುಂಗಭದ್ರೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 10:25 IST
Last Updated 13 ಏಪ್ರಿಲ್ 2011, 10:25 IST

ಗದಗ: ‘ಒಂದು ತಿಂಗ್ಳಿಂದ್ ಸವಳ ನೀರ್ ಕುಡದ್ ಬ್ಯಾಸರ ಆಗಿತ್ತು. ಬೋರ್ ಹೊಡೆದು, ಮೈಲುಗಟ್ಟಲೆ ಬಿಸಿಲಿನಲ್ಲಿ ನಡೆದು ಕುಡಿಯುವ ನೀರು ತುಗೊಂಡ್ ಬರ್ತಿದ್ವಿ, ಈಗ ಕುಡ್ಯಾಕರ ನೀರ್ ಬಿಟ್ಟಿದ್ದ ಬಾಳ್ ಸಂತೋಷ ಆಗೈತಿ’
-ಕಳೆದ ಒಂದು ತಿಂಗಳಿನಿಂದ ತುಂಗಭದ್ರಾ ನದಿ ನೀರಿನ ನಿರೀಕ್ಷೆಯಲ್ಲಿದ್ದ ಗದಗ-ಬೆಟಗೇರಿ ಅವಳಿನಗರದಲ್ಲಿ ಮಂಗಳವಾರ ನೀರು ಬಂದ ತಕ್ಷಣ ಮಹಿಳೆಯರಿಂದ ಬಂದ ಪ್ರತಿಕ್ರಿಯೆ ಇದು.

ಗದಗ-ಬೆಟಗೇರಿ ಅವಳಿನಗರದ ಜನತೆಗೆ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಆಗದ ಹಿನ್ನೆಲೆಯಲ್ಲಿ ಜನರು ತತ್ತರಿಸಿದ್ದರು. ಕುಡಿಯುವ ನೀರಿಗಾಗಿ ಜನರು ಕೊಡ ಹಿಡಿದು ಮೈಲುಗಟ್ಟಲಿನಿಂದ ನೀರು ತರುವುದು ಹಾಗೂ ಕೈಬೋರಿನ ಸವಳ ನೀರನ್ನು ಕುಡಿಯುತ್ತಿರುವುದು ಸಾಮಾನ್ಯವಾಗಿತ್ತು.

ಬಡಾವಣೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ನಿವಾಸಿಗಳು ಕೊಡ ಹಿಡಿದು ನಗರಸಭೆ ಮುಂದೆ ಧರಣಿ ನಡೆಸಿದ್ದರು. ಅಲ್ಲದೆ, ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು.

ADVERTISEMENT

ಏತನ್ಮಧ್ಯೆ ನಗರಸಭೆ ಪರ್ಯಾಯ ವ್ಯವಸ್ಥೆಯಾಗಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ವಿವಿಧ ಬಡಾವಣೆಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಕ್ರಮ ಕೈಗೊಂಡಿತ್ತು. ಆದರೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿದ್ದಿಲ್ಲ. 

ಆದರೆ, ಗದಗ-ಬೆಟಗೇರಿ ಅವಳಿ ನಗರದ ಖಾನತೋಟ, ವೀರನಾರಾಯಣ ದೇವಸ್ಥಾನ ಹತ್ತಿರ ಸೇರಿದಂತೆ ನಗರದ ಇತರ ಪ್ರದೇಶದ ಬಡಾವಣೆಗಳಿಗೆ ನಗರಸಭೆ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಿದ್ದು, ಅವಳಿನಗರದ ಕುಡಿಯುವ ನೀರಿನ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.

ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಅವಳಿನಗರದ ಜನತೆಗೆ ಕೊಂಚ ಸಮಾಧಾನ ದೊರೆತಿದೆ. ನಗರದ ಕೆಲ ಬಡಾವಣೆಗಳಲ್ಲಿ ತುಂಗಭದ್ರಾ ನದಿ ನೀರು ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರು ಕೊಡ ಹಿಡಿದು ನಲ್ಲಿಯಿಂದ ನೀರು ತುಂಬುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.