ADVERTISEMENT

ಗಜೇಂದ್ರಗಡದಲ್ಲೊಬ್ಬ `ವೃಕ್ಷಮಿತ್ರ'

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 9:27 IST
Last Updated 10 ಜುಲೈ 2013, 9:27 IST

ಗಜೇಂದ್ರಗಡ: ಮನುಷ್ಯನ ತನ್ನ ದುರಾಸೆಯಿಂದಾಗಿ ಮರಗಳನ್ನು ಕಡಿದು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದ್ದಾನೆ. ಇದರಿಂದ ಅರಣ್ಯ ಸಂಪತ್ತು ಸಹ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ, ಆರೋಗ್ಯಯುತ ಬದುಕಿಗೆ ಸುಂದರ ಪರಿಸರ ಅವಶ್ಯ ಎಂಬ ಪರಿಕಲ್ಪನೆಯೊಂದಿಗೆ ಸಸಿಗಳನ್ನು ನೆಟ್ಟು, ಪೋಷಿಸುತ್ತಿರುವ ಇಲ್ಲಿನ ಬಸವರಾಜ ಹೂಗಾರ  ಗಮನ ಸೆಳೆಯುತ್ತಾರೆ.

2000ರಲ್ಲಿ ಬಸವರಾಜ ಅವರು ನಗರದ ಪ್ರತಿಷ್ಠಿತ ಬಡಾವಣೆಯಾದ ಜವಳಿ ಪ್ಲಾಟ್‌ನಲ್ಲಿ ಸಸಿಗಳನ್ನು ನೆಡಲು ಆರಂಭಿಸಿದರು. ಈಗಾಗಲೇ ನಗರದ ಭೂಮರಡ್ಡಿ ಪ್ಲಾಟ್, ಕಲ್ಮಠ ಪ್ಲಾಟ್, ಹಿರೇಮನಿ ಪ್ಲಾಟ್, ಭಗವಾನ ಮಹಾವೀರ ಆಯುರ್ವೇದಿಕ್ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಜಗದಂಬಾ ಪ್ರೌಢಶಾಲೆ, ತೋಂಟದಾರ್ಯ ಪ್ರೌಢಶಾಲೆ, ಈದ್ಗಾ ಮೈದಾನ, ವೀರಶೈವ ಸ್ಮಶಾನಗಳಲ್ಲಿ ನೆಟ್ಟ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ.

ಬಸವರಾಜ ಅವರು ಕೈಗೊಂಡಿರುವ ಈ ಪರಿಸರ ನಿರ್ಮಾಣ ಕಾರ್ಯಕ್ಕೆ ಉದ್ಯಮಿ ಶಿವಾನಂದ ಜವಳಿ, ಸ್ನೇಹಿತರಾದ ವೀರೇಶ ರಾಜೂರ, ನಾಗರಾಜ ಅಂಬೋರೆ, ಮುತ್ತಣ್ಣ ಸಂಗಮದ, ಪ್ರಕಾಶ ವಡ್ಡರ, ಶರಣಪ್ಪ ರಾಜೂರ, ಜಗದೀಶ ಬಳಿಗೇರ, ಚೇತನ ಬಾಕಳೆ, ಸುರೇಶ ಮಾರನಬಸರಿ, ಅಮಿತ ವಂದಕುದರಿ, ಕುಮಾರ ಸಂಗಮದ, ಶ್ರೀಧರ ತಳ್ಳಿಹಾಳ, ರಾಘು ರಾಯಬಾಗಿ, ನಾರಾಯಣ ಬಾಕಳೆ, ಸುರೇಶ ತುಗ್ಗಲದೋಣಿ ಹಾಗೂ ಜವಳಿ ಪ್ಲಾಟ್‌ನ ನಿವಾಸಿಗಳು ಬೆನ್ನೆಲುಬಾಗಿ ನಿಂತಿದ್ದಾರೆ.

ಸದ್ಯ ಪ್ರಗತಿ ಹವ್ಯಾಸಿ ಯುವಕ ಸಂಘ ಹಾಗೂ ಬಸವ ಕೇಂದ್ರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಹೂಗಾರ ಸಸಿ ನೆಡುವ ಕಾರ್ಯ ವ್ಯಾಪ್ತಿಯನ್ನು ನಗರದಾದ್ಯಂತ ವಿಸ್ತರಿಸುವ ಹೆಬ್ಬಯಕೆ ಹೊಂದಿದ್ದಾರೆ.

ನಗರದಲ್ಲಿ ಧೂಳು ಹೆಚ್ಚುತ್ತಿದೆ. ಇದರಿಂದಾಗಿ ಜನರು ಅಸ್ತಮಾ, ಕ್ಷಯ ರೋಗದಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಗೆ ಸಹ ಗಿಡಗಳನ್ನು ಬೆಳೆಸುವುದು ಸ್ವಲ್ಪ ಮಟ್ಟಿಗೆ ಪರಿಹಾರ ಒದಗಿಸಬಲ್ಲದು. ಹೀಗಾಗಿ ಈಗ ನೆಟ್ಟಿರುವ ಸಸಿಗಳು ಹೆಮ್ಮರವಾಗಿ ಬೆಳೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಸರ ಪ್ರೀತಿಯಲ್ಲಿ ಸಿಗುವ ತೃಪ್ತಿ ಮತ್ತಾವುದರಲ್ಲಿಯೂ ಸಿಗದು ಎಂದು ಬಸವರಾಜ ಹೂಗಾರ ಅಭಿಪ್ರಾಯಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.