ಮುಳಗುಂದ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ದೊರೆತ ಅವಕಾಶ ವನ್ನು ಸದುಪಯೋಗಪಡಿಸಿಕೊಂಡು ಸತತ ಅಭ್ಯಾಸ, ಕಠಿಣ ಪರಿಶ್ರಮದಿಂದ ಉನ್ನತ ಗುರಿ ಸಾಧನೆಗೆ ಮುಂದಾಗಬೇಕು ಎಂದು ಪ್ರಾಚಾರ್ಯ ಟಿ.ವಿ. ಮಾಗಳದ ಸಲಹೆ ನೀಡಿದರು.
ಸ್ಥಳೀಯ ಎಸ್ಜೆಜೆಎಂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅನ್ನ-ಬದುಕನ್ನು ನೀಡಿದರೆ, ಜ್ಞಾನ-ಭವಿಷ್ಯವನ್ನು ರೂಪಿಸುತ್ತದೆ. ಅಕ್ಷರ-ಸ್ವಂತ ಬದುಕಿಗಾದರೆ, ಆದರ್ಶ ಸಾಮಾಜಿಕ ಬದುಕಿಗೆ, ಬುದ್ಧಿವಂತಿಕೆ ಹಾಗೂ ಹೃದಯ ಶ್ರೀಮಂತಿಕೆ ರೂಢಿ ಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಭವಿಷ್ಯದ ಭಾವಿ ಜೀವನ ಉಜ್ವಲಗೊಳಿಸಿಕೊಳ್ಳಲು ಉತ್ತಮ ಸಂಸ್ಕಾರ ಪಡೆಯಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸಿ.ಬಿ. ಬಡ್ನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಆಸ್ತಿ, ಈ ದಿಸೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಸ್ಪರ್ಧಾ ಮನೋಭಾವನೆಯನ್ನು ಅಳವಡಿಸಿಕೊಂಡು ಆಧುನಿಕ ತಾಂತ್ರಿಕತೆಯಲ್ಲಿ ಪ್ರತಿಭೆಗಳು ಹೆಚ್ಚು ಬೆಳೆದು ಶಾಲೆಗೆ, ತಂದೆ ತಾಯಿಗಳಿಗೆ ಕೀರ್ತಿ ತರವಂತವರಾಗಬೇಕು ಎಂದು ಸಲಹೆ ನೀಡಿದರು.
ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಚಾರ್ಯ ಎಸ್.ಎಫ್. ಮುದ್ಧನ ಗೌಡರ ವಾರ್ಷಿಕ ವರದಿ ವಾಚಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಮಠದ, ಡಿ.ಬಿ.ಬಂಗಾರಿ, ಆರ್ಎಫ್. ಹಿರೇಮಠ, ವೈದ್ಯ ಎಸ್.ಸಿ. ಚವಡಿ, ಎಂ.ಡಿ. ಬಟ್ಟೂರ, ಎಂ.ಪಿ. ಮೆಣಸಿನಕಾಯಿ, ಬಿ.ಜಿ. ಯಳವತ್ತಿ, ಇ.ಎಂ.ಗುಳೇದಗುಡ್ಡ, ಎ.ಎಂ. ಅಂಗಡಿ ಮತ್ತಿತರರು ಉಪಸ್ಥಿರಿದ್ದರು.
ಇದೇ ಸಂದರ್ಭದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಬಹುಮಾನ ವಿತರಿಸಲಾಯಿತು. ವಿಷಯ ಬೋಧನೆಗೆ ಹೆಚ್ಚು ಅಂಕ ಬಂದಿರುವ ಶಿಕ್ಷಕರನ್ನು ಸನ್ಮಾನಿ ಸಲಾಯಿತು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎನ್.ಪಿ. ಲಮಾಣಿ ಸ್ವಾಗತಿಸಿದರು. ಚಂದ್ರಶೇಖರ. ಎಸ್. ನಿರೂಪಿಸಿದರು. ಎಸ್.ಎಚ್. ಪತ್ತಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.