ADVERTISEMENT

ಗ್ರಾ.ಪಂ. ಆಡಳಿತ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 10:25 IST
Last Updated 22 ಸೆಪ್ಟೆಂಬರ್ 2011, 10:25 IST
ಗ್ರಾ.ಪಂ. ಆಡಳಿತ ವಿರುದ್ಧ ಪ್ರತಿಭಟನೆ
ಗ್ರಾ.ಪಂ. ಆಡಳಿತ ವಿರುದ್ಧ ಪ್ರತಿಭಟನೆ   

ಲಕ್ಷ್ಮೇಶ್ವರ:ಚುನಾಯಿತ ಸದಸ್ಯರು ಅಧಿಕಾರ ದುರುಪಯೋಗ ಪಡಿಸಿಕೊಂಡು ಜನತೆಯ ಹಿತ ಕಡೆಗಣಿಸಿ ಮನ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಹಾಗೂ ಸರ್ಕಾರದ ಯೋಜನೆಗಳಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು~ ಎಂದು ಒತ್ತಾಯಿಸಿ ಸಮೀಪದ ಶಿಗ್ಲಿಯ ಗುರುಬಸಪ್ಪಜ್ಜ ಆಶ್ರಯ ಕಾಲೊನಿ ನಿವಾಸಿಗಳು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಈಚೆಗೆ ಪ್ರತಿಭಟನೆ ನಡೆಸಿದರು.

ಗ್ರಾಮದ ದೊಡ್ಡೂರು ಕ್ರಾಸ್‌ನಿಂದ ಮೆರವಣಿಗೆಯಲ್ಲಿ ಪಂಚಾಯಿತಿಗೆ ಆಗಮಿಸಿದ ಪ್ರತಿಭಟನಾಕಾರರು ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಆಗಿರುವ ಕಾಮಗಾರಿಗಳು ಸಮರ್ಪಕವಾಗಿರದೆ ಇದರಲ್ಲಿ ಹಣದ ದುರುಪಯೋಗ ನಡೆದಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಬೇಕಾದ ಅಗತ್ಯ ಇದೆ.
 
ಅದರಂತೆ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗಳನ್ನು ಕೂಡ ಪರಿಶೀಲನೆ ಮಾಡಬೇಕು. ಆಶ್ರಯ ಮನೆ ಹಂಚಿಕೆ ಹಾಗೂ ಪಡಿತರ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚನ್ನಬಸಣ್ಣ ಬಳಿಗಾರ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು.ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ `ಅಕ್ಟೋಬರ್ 31ರ ಒಳಗಾಗಿ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೊನೆಗೊಂಡಿತು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎನ್. ತೋಟದ, ಶಿವಾನಂದ ಶಿರಹಟ್ಟಿ, ಅಶೋಕ ಶಿರಹಟ್ಟಿ, ಈರಣ್ಣ ಅಕ್ಕೂರ, ಕೇಶವ ಗುಲಗಂಜಿ, ಮಹಾಂತೇಶ ಹತ್ತಿಕಾಳ, ಈರಣ್ಣ ನವಲಗುಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಎಫ್.ಎಂ. ಕೂಡ್ಲಮಠ, ಉಮ್ಮಕ್ಕ ಗಣಮುಖಿ, ರತ್ನವ್ವ ಅಣ್ಣಿಗೇರಿ, ಹಜರತ್‌ಬಿ ತಿಮ್ಮಾಪುರ, ರತ್ನ ನವಲಗುಂದ, ಕಸ್ತೂರೆವ್ವ ಕಳ್ಳಿಹಾಳ, ಸೀತಮ್ಮ ಭಂಡಿವಡ್ಡರ, ಗಂಗಮ್ಮ ಹರಿಜನ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.