ADVERTISEMENT

ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 11:15 IST
Last Updated 2 ಫೆಬ್ರುವರಿ 2011, 11:15 IST

ಗಜೇಂದ್ರಗಡ: ಸ್ಪರ್ಧಾತ್ಮಕ ಯುಗ ದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಗೆ ಆಂಗ್ಲ ಭಾಷೆಯ ಜ್ಞಾನ ಅತ್ಯಗತ್ಯವಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಐ.ಆರ್.ಅಕ್ಕಿ ಅಭಿಪ್ರಾಯಪಟ್ಟರು.ಸ್ಥಳೀಯ ವಿ.ಟಿ.ರಾಯಬಾಗಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರ ಜೊತೆಗೆ ಪಾಲಕರ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಎಲ್ಲ ಪಾಲಕರು ತಮ್ಮ ಮಕ್ಕಳ ಅಭ್ಯಾಸ ಕ್ರಮದ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು ಎಂದು ಅವರು ಹೇಳಿದರು.ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವನ್ನು ಕೊಟ್ಟು ಅವರನ್ನು ಸಮಾಜದಲ್ಲಿ ಒಬ್ಬ ಸತ್ಪ್ರಜೆಯನ್ನಾಗಿ ರೂಪಿಸಲು ಶಿಕ್ಷಕರಿಗೆ ಪಾಲಕರು ಮತ್ತು ಸಮುದಾಯ ಕೈ ಜೋಡಿಸಿ ಒಟ್ಟಾಗಿ ಕೆಲಸ ಮಾಡ ಬೇಕು ಎಂದು ಅವರು ತಿಳಿಸಿದರು.

ಪುರಸಭೆ ಸದಸ್ಯ ಮೋಹನ ರಾಯಬಾಗಿ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಶಿಕ್ಷಣವು ಅವಶ್ಯವಾಗಿದ್ದು, ಶಿಕ್ಷಕರು ಮಕ್ಕಳ ಮನೋಭಾವನೆಗೆ ತಕ್ಕಂತೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಒತ್ತು ಕೊಡಬೇಕು. ಜೊತೆಗೆ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ 2010ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಕ್ಷತಾ ರಾಯಬಾಗಿ, ಕೀರ್ತಿ ಪವಾರ, ಶಿಲ್ಪಾ ರಂಗ್ರೇಜ ಅವರಿಗೆ ತುಕರಾಮ ಶಿಂಗ್ರಿ ಬಹುಮಾನ ವಿತರಿಸಿದರು.ಸಂಸ್ಥೆಯ ಅಧ್ಯಕ್ಷ ಟಿ.ವಿ.ರಾಯಬಾಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿ.ಎಸ್.ಐ. ವೀರಾರೆಡ್ಡಿ, ಕೆ.ಎಸ್.ಪವಾರ, ಎಸ್.ಕೆ.ರಾಯಬಾಗಿ ಭಾಸ್ಕರ ರಾಯಬಾಗಿ ಅಂಬಾಸಾ ರಾಯಬಾಗಿ, ಪ್ರಕಾಶ ರಾಯಬಾಗಿ, ಸುರೇಂದ್ರಸಾ ರಾಯಬಾಗಿ, ಮಂಜು ದಾನಿ, ಗಣೇಶ ರಂಗ್ರೇಜ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಬಿ.ಎ.ಹೂಗಾರ ಸ್ವಾಗತಿಸಿದರು. ಎಚ್.ಎಚ್.ಕಂಠಿ ವಂದಿಸಿದರು. ಸವಿತಾ ಭಾಂಡಗೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.