ADVERTISEMENT

ಜಂಪವ್ವಗೆ ` 750 ವಿಶೇಷ ವೃದ್ಧಾಪ್ಯ ವೇತನ!

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:10 IST
Last Updated 9 ಜನವರಿ 2014, 6:10 IST
ಅಸಮರ್ಪಕ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಜಂಪವ್ವ ಅವರಿಗೆ ಬುಧವಾರ ₨ 750 ವಿಶೇಷ ವೃದ್ಧಾಪ್ಯ ವೇತನದ ಆದೇಶ ನೀಡಿದ ಗಜೇಂದ್ರಗಡದ ವಿಶೇಷ ತಹಶೀಲ್ದಾರ್‌ ಸಿ.ಎಂ. ಕಲಹಾಳ.
ಅಸಮರ್ಪಕ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಜಂಪವ್ವ ಅವರಿಗೆ ಬುಧವಾರ ₨ 750 ವಿಶೇಷ ವೃದ್ಧಾಪ್ಯ ವೇತನದ ಆದೇಶ ನೀಡಿದ ಗಜೇಂದ್ರಗಡದ ವಿಶೇಷ ತಹಶೀಲ್ದಾರ್‌ ಸಿ.ಎಂ. ಕಲಹಾಳ.   

ಗಜೇಂದ್ರಗಡ: ಕಂದಾಯ ನಿರೀಕ್ಷಕರ ನಿರ್ಲಕ್ಷ್ಯ­ದಿಂದ ನಿಗದಿತ ವೃದ್ಧಾಪ್ಯ ವೇತನ ಪಡೆಯಲು ವಿಫಲರಾಗಿದ್ದ  ಇಲ್ಲಿಯ  ಜಂಪವ್ವ ಅಜ್ಮೀರ್‌ ಅವರಿಗೆ ಕಂದಾಯ ಇಲಾಖೆ ತಿಂಗಳಿಗೆ  ` 750 ವಿಶೇಷ ವೃದ್ಧಾಪ್ಯ ವೇತನ ನೀಡಲು ಆದೇಶ ನೀಡಿದೆ.

ಜಂಪವ್ವ ಅವರ ಸಂಕಷ್ಟದ ಬದುಕು ಕುರಿತು ‘ಪ್ರಜಾವಾಣಿ’ ಮಂಗಳವಾರ ‘ಜಂಪವ್ವನ ವೃದ್ಧಾಪ್ಯ ವೇತನಕ್ಕೂ ಕತ್ತರಿ!’  ತಲೆ ಬರಹದಡಿ ಪ್ರಕಟಿಸಿದ್ದ ಮಾನವೀಯ ವರದಿಗೆ ಎಚ್ಚೆತ್ತ ಕಂದಾಯ ಇಲಾಖೆ ಬುಧವಾರ ವಯೋವೃದ್ಧೆ ಜಂಪವ್ವಳಿಗೆ ವಿಶೇಷ ವೃದ್ಧಾಪ್ಯ ವೇತನದ ಆದೇಶ ನೀಡಲಾಯಿತು.

‘ಜಂಪವ್ವಳ ಅವರ ಸಂಕಷ್ಟದ ಜೀವನ ಕುರಿತ ವರದಿ ಓದಿ ಮನಸ್ಸಿಗೆ ತೀವ್ರ ಬೇಸರ ಉಂಟಾ­ಗಿದೆ. ನಿಸ್ಸಹಾಯಕ ವೃದ್ಧೆಯನ್ನು ಬಂಧುಗಳು ದೂರ ಮಾಡಿರುವ ಹಾಗೂ ಬದುಕಿನ ಸಂಧ್ಯಾ­ಕಾಲದಲ್ಲಿ ಆಸರೆಯಾಗಬೇಕಿದ್ದ ಪುತ್ರರಿಬ್ಬರ ಅಕಾಲಿಕ ಮರಣ, ಪತಿಯ ದುರ್ಮರಣ  ಸಂಗತಿ ತಿಳಿದು ತುಂಬಾ ಬೇಸರವಾಯಿತು’ ಎಂದು ವಿಶೇಷ ತಹಶೀಲ್ದಾರ ಸಿ.ಎಂ. ಕಲಹಾಳ ಬೇಸರ ವ್ಯಕ್ಯಪಡಿಸಿದರು.

ಸದ್ಯ ಜಂಪವ್ವಳಿಗೆ ಎಂಭತ್ತು ವರ್ಷ ದಾಟಿದ ಹಿನ್ನೆಲೆಯಲ್ಲಿ ₨ 500 ಇದ್ದ ವೃದ್ಧಾಪ್ಯ ವೇತನವನ್ನು ₨ 750 ಕ್ಕೆ ಏರಿಸ­ಲಾಗಿದೆ. ಹಂತ–ಹಂತವಾಗಿ ಜಂಪವ್ವಳಿಗೆ ಆಸರೆ ಮನೆ ಇತ್ಯಾದಿ ಸೌಕರ್ಯಗಳನ್ನು ಒದಗಿಸುವ ಕಾರ್ಯ ಕೈಗೊಳ್ಳ­ಲಾಗುವುದು. ನಿಸ್ಸಹಾಯಕ ವಯೋವೃದ್ಧರನ್ನು ಸಮಾಜ ಮಾನವೀಯತೆ ನೆಲೆ ಗಟ್ಟಿನಲ್ಲಿ ನೋಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು. ‘ಜಂಪವ್ವಳಿಗೆ ಆಶ್ರಯ ಯೋಜನೆ­ಯಡಿಯಲ್ಲಿ ಮನೆ ನೀಡಬೇಕು. ಬಂಧು–­ಬಳಗದಿಂದ ದೂರ ಉಳಿದು ಪುರ­ಸಭೆಯ ವಾಣಿಜ್ಯ ಮಳಿಗೆಯ ಗೋಡೆ ಬದಿಯಲ್ಲಿ ದಯನೀಯ ಬದುಕು ಸಾಗಿಸುತ್ತಿರುವ ಜಂಪವ್ವ ಅವರನ್ನು ಸರ್ಕಾರ ಗೌರವದಿಂದ ಕಂಡು ನಾಗರಿಕ ಮೂಲ ತ ಸೌಕರ್ಯ ಒದಗಿಸಬೇಕು’ ಎಂದು ಪ್ರಗತಿಪರ ಚಿಂತಕ ಪಾಂಡುರಂಗ ಶಿಲವೇರಿ ವಿಶೇಷ ತಹಶೀಲ್ದಾರ್‌ ಸಿ.ಎಂ.­ಕಲಹಾಳ ಅವರನ್ನು ಆಗ್ರಹಿಸಿದರು.

‘ಐದಾರು ವರ್ಷಗಳಿಂದಲೂ ಪುರಸಭೆ ವಾಣಿಜ್ಯ ಮಳಿಗೆಯ ಬದಿಯಲ್ಲಿ ಆಸರೆ ಕಂಡುಕೊಂಡು ಭಿಕ್ಷಾಟನೆ ನೆಚ್ಚಿಕೊಂಡು ಅಸಮರ್ಪಕ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಜಂಪವ್ವ ಅವರ ಬದುಕಿನ ಕರುಣಾಜನಕ ಕಥೆ­ಯನ್ನು ಪ್ರಕಟಿಸಿದ ‘ಪ್ರಜಾವಾಣಿ’ ಕಾರ್ಯವನ್ನು ವಿಶೇಷ ತಹಶೀಲ್ದಾರ ಶ್ಲಾಘಿಸಿದರು.

ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗ್ರಾಮ ಲೆಕ್ಕಾಧಿಕಾರಿ ಪರಶುರಾಮ ತಳವಾರ, ಗ್ರಾಮ­ಸೇವಕ, ಕಳಕಪ್ಪ ಸ್ವಾಮಿ, ಪಾಂಡುರಂಗ ಶಿಲ­ವೇರಿ, ಕಳಕಪ್ಪ ಜಾಂಡಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.