ADVERTISEMENT

ತಾ.ಪಂ. ಸಭೆಗೆ ಅಧಿಕಾರಿಗಳ ಗೈರು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:16 IST
Last Updated 7 ಸೆಪ್ಟೆಂಬರ್ 2013, 6:16 IST

ರೋಣ: ತಾ.ಪಂ  ಸಾಮಾನ್ಯ ಸಭೆ ಮತ್ತು ಪ್ರಗತಿ ಪರೀಶಿಲನಾ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದು, ಅಧಿಕಾರಿಗಳು ಸಭೆಗೆ ಬಾರದ ಹೊರತು ಸಭೆಯನ್ನು ನಡೆಸುವುದು ಬೇಡ ಎಂದು ಪಕ್ಷಾತೀತವಾಗಿ ಸದಸ್ಯರು ಸಭೆಯಿಂದ ಹೊರ ನಡೆದ ಘಟನೆ ಪಟ್ಟಣದ ತಾ.ಪಂ. ಸಭೆಯಲ್ಲಿ ಶುಕ್ರವಾರ ಮುಂದೂಡಲಾಯಿತು.

ಕಳೆದ ಎರಡು ವರ್ಷಗಳಿಂದ ಇದೇ ರಿತಿ ಅಧಿಕಾರಿಗಳು ಸಭೆಗಳಿಗೆ ಗೈರು ಆಗುವುದು ಸಾಮಾನ್ಯವಾಗಿದ್ದು ಅಧಿಕಾರಿಗಳೇ ಸಭೆಗೆ ಬರಲಿಲ್ಲವೆಂದರೆ ಹೇಗೆ ಎಂದು ಸದಸ್ಯರು ಪ್ರಶ್ನಿಸಿದರು. ಎಲ್ಲ ಅಧಿಕಾರಿಗಳು ಸಾಮಾನ್ಯ ಸಭೆಗಳಿಗೆ ಹಾಜರಾಗುವತನಕ ಸಭೆಯನ್ನು ನಡೆಸಬೇಡಿ ಎಂದು   ಪಕ್ಷಾತೀತವಾಗಿ ಎಲ್ಲಾ ಸದಸ್ಯರು ತಾ.ಪಂ. ಅಧ್ಯಕ್ಷರನ್ನು ಆಗ್ರಹಿಸಿದರು.

ಪ್ರತಿ ಸಭೆಗೂ ಗೈರು ಹಾಜರಾಗುತ್ತಿರುವ ಲೋಕೋಪಯೋಗಿ ಇಲಾಖೆಯ ಎಂ.ಬಿ.ದಾನರೆಡ್ಡಿ, ವಲಯ ಅರಣ್ಯ  ಅಧಿಕಾರಿ ಬಿಳಗಿ ಮತ್ತು ಪಿಎಲ್‌ಡಿ ಬ್ಯಾಂಕ್ ಅಧಿಕಾರಿಗಳನ್ನು ಸಭೆಗೆ ಕರೆಯಿಸುವಂತೆ ಸದಸ್ಯರು ಪಟ್ಟು ಹಿಡಿದರು. ಅಧ್ಯಕ್ಷೆ ಲಲಿತಾ ಪೂಜಾರ ಮತ್ತು ಇಒ ಎಂ. ನಾರಾಯಣ ಸಂಭಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದಾಗ ಈಗಾಗಲೇ ಗದುಗಿನಲ್ಲಿ ಎ.ಸಿ.ಯವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಈ ಸಭೆಯಲ್ಲಿ ಭಾಗಿಯಾಗಿದ್ದೇವೆ ಎಂಬ ಉತ್ತರ ಸಿಕ್ಕಿತ್ತು.

ಇದರಿಂದ ಕೆರಳಿದ ರಮೇಶ ಚವ್ಹಾಣ, ನಾವೇ ಎ.ಸಿ. ಅವರಿಗೆ ಕರೆ ಮಾಡಿ ಕೇಳುತ್ತೆವೆ ಎನ್ನುತ್ತಿದ್ದಂತೆ ಎಚ್ಚತ್ತುಕೊಂಡ ಅಧಿಕಾರಿಗಳು  ಬೇರೆ ಕಾರ್ಯಕ್ರಮದಲ್ಲಿ ಇರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ನಂತರ ಸಭೆಯನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.