ADVERTISEMENT

ನಗರ ಸ್ವಚ್ಛತೆಗೆ ಬೇಕಿದೆ ಜನರ ಸಹಕಾರ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:54 IST
Last Updated 16 ಡಿಸೆಂಬರ್ 2013, 5:54 IST

ಗದಗ: ಅವಳಿ ನಗರವು ಸ್ವಚ್ಛತೆಯಿಂದ ಕಂಗೊಳಿಸಲು ಕೇವಲ ಸರ್ಕಾರದ ಅಭಿವೃದ್ಧಿ ಯೋಜನೆಗಳಿಂದ ಸಾಧ್ಯವಿಲ್ಲ. ಅವುಗಳ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಷ್ಟೆ ಮುಖ್ಯ.

ನಗರವನ್ನು ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಗದಗ ನಗರಸಭೆ ಸಮರೋಪಾದಿಯಲ್ಲಿ ನಗರದ 35 ವಾರ್ಡ್‌ಗಳಲ್ಲಿ ಹಲವು ವರ್ಷಗಳಿಂದ  ಸಂಗ್ರಹಗೊಂಡಿದ್ದ ಕಸವನ್ನು ₨ 20 ಲಕ್ಷ ವೆಚ್ಚದಲ್ಲಿ ನಗರಸಭೆಯ 7 ಹಾಗೂ ಖಾಸಗಿ ಸಂಸ್ಥೆಗಳ 11 ಟ್ರ್ಯಾಕ್ಟರ್ ಗಳ ಮೂಲಕ ಕಾಮಗಾರಿ ಆರಂಭಿಸಿದ್ದಾರೆ.

ಸುಮಾರು 200 ಪೌರಕಾರ್ಮಿಕರು ಗಳನ್ನು ಕಸ ವಿಲೇವಾರಿ ಮಾಡಿ ಎರಡನೇ ಸ್ವಚ್ಛತಾ ಆಂದೋಲನ ಕಾರ್ಯವನ್ನು ಮುಗಿಸಿದ್ದು ಭಾನುವಾರದಿಂದ ಒಂದು ತಿಂಗಳ ವರೆಗೆ ಮತ್ತೆ ಮೂರನೇ ಸ್ವಚ್ಛತಾ ಆಂದೋಲನ ಆರಂಭಗೊಳ್ಳುತ್ತಿದೆ.

ಪ್ರತಿ ಎರಡು ವಾರ್ಡ್‌ಗೆ 1 ಟ್ರ್ಯಾಕ್ಟರ್ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಪ್ರತಿ ವಾರ್ಡ್‌ನಲ್ಲಿ 200– 250 ಮನೆಗಳಿಗೆ ಒಂದು ತಳ್ಳುವ ಗಾಡಿಯಿಂದ ಕಸ ಸಂಗ್ರಹಿಸಲಿದೆ. ಇದರಲ್ಲಿ 56 ತಳ್ಳುಗಾಡಿ ಗಳು, 7 ಸ್ವಸಹಾಯ ಸಂಘದ 56 ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 78 ನೂತನ ತಳ್ಳುವ ಗಾಡಿಗಳು ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸಲು ಕಾದು ಕುಳಿತಿವೆ. ಇಷ್ಟೆಲ್ಲಾ  ಬೆಳವಣಿಗೆ ನಗರ ಜನತೆಗೆ ಅಲ್ಪಮಟ್ಟಿಗೆ ಸಮಾಧಾನ ನೀಡಿದೆ. ಆದರೂ ಪ್ರಮುಖ ಕಾರ್ಯ ಜನರಿಂದಲೇ ಪ್ರಾರಂಭವಾಗಬೇಕಿದೆ.

ಈಗಾಗಲೇ ಸಾಕಷ್ಟು ಪ್ರಮಾಣದ ಕಸವನ್ನು ನಗರದಿಂದ ಹೊರ ಸಾಗಿಸಿದ್ದು ಜವಳಿ ಗಲ್ಲಿ ಹಾಗೂ ಸ್ವಪ್ನಾ ಹೋಟೆಲ್ ಹತ್ತಿರವಿರುವ ಬೃಹತ್ ಗಟಾರದ ಕಸ ಮಾತ್ರ ಉಳಿದಿದ್ದು ಮುಂದಿನ ದಿನಗಳಲ್ಲಿ ಅದನ್ನು ನಗರದಿಂದ ಸಾಗಿಸಲಾಗು ವುದು ಎಂದು ಪರಿಸರ ಎಂಜಿನಿಯರ್ ಆನಂದ ಬದಿ ತಿಳಿಸಿದರು.

ನಗರಸಭೆಯು ಇಷ್ಟಕ್ಕೆ ಸುಮ್ಮ ನಾಗದೇ ಶಾಶ್ವತ ಪರಿಹಾರ ಕಂಡು ಕೊಳ್ಳಲು ಕೆ.ಎಚ್.ಪಾಟೀಲ ಸ್ಟೇಡಿಯಂ ಪಕ್ಕದಲ್ಲಿ ನಿರ್ಮಿಸಿರುವ ಕಸದ ಬ್ಯಾರೆಲ್ ಗಳನ್ನು ಇತರೆ ಉಳಿದ ವಾರ್ಡ್‌ಗಳಿಗೆ ವಿಸ್ತರಿಸಿದರೆ ಸಾರ್ವಜನಿಕರು ಬೆಳಗಿನ ಜಾವ ಕಸದ ಗಾಡಿಯ ದಾರಿ ಕಾಯುವ ಬದಲು ಮನೆಯ ಮುಂದಿರುವ ಬ್ಯಾರೆಲ್ ಗಳಿಗೆ ಕಸ ಹಾಕಬಹುದು.

ಹೆಚ್ಚು–ಹೆಚ್ಚು ಬ್ಯಾರಲ್ ಗಳನ್ನು ಇಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವುದು. ಜನತೆ ಸಹ ಮನೆಯ ಕಸವನ್ನು ಕಂಡಲ್ಲಿ ಬಿಸಾಡದೆ ಗುಂಡಿಯಲ್ಲಿ ಹಾಕಿ ಸ್ವಚ್ಛತೆ ಕಾಪಾಡಬೇಕು. ಬರೀ ನಗರಸಭೆಯನ್ನೆ ದೂಷಿಸುವುದು ತಪ್ಪು. ನಗರದಲ್ಲಿ ಎಲ್ಲೆಂದರಲ್ಲಿ ಕಣ್ಣಿಗೆ ಕಾಣುವ ಕಸದಲ್ಲಿ ಜನರ ಉದಾಸೀನತೆ ಎದ್ದು ಕಾಣುತ್ತದೆ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಂತೆ ಮನೆಯ ಮುಂದಿನ ಪರಿಸರವನ್ನು ಸುಂದರವಾಗಿಟ್ಟುಕೊಂಡರೆ ನಗರ ಹೇಗೆ ಕಾಣುವುದೆಂದು ಒಮ್ಮೆ ಆಲೋಚಿಸಿರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.