ನರಗುಂದ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನರಗುಂದಕ್ಕೆ ಸೋಮವಾರ ಭೇಟಿ ನೀಡುತ್ತಿದ್ದಾರೆ. ಮಹದಾಯಿ ಹೊರಾಟದಿಂದ ಗಮನ ಸೆಳೆದಿರುವ, ಬಂಡಾಯದ ನೆಲ ಎಂದೇ ಹೆಸರಾದ ನರಗುಂದ ಪಟ್ಟಣಕ್ಕೆ ಇದೇ ಮೊದಲ ಬಾರಿಗೆ ಅವರು ಬರುತ್ತಿದ್ದಾರೆ.
ಕಾರ್ಯಕ್ರಮ ನಡೆಯುವ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಭರದ ಸಿದ್ಧತೆ ನಡೆಯಿತು. ಹಿಂದೆಯೂ ಹಲವು ಬಾರಿ ಮುಖ್ಯಮಂತ್ರಿ ಕಾರ್ಯಕ್ರಮ ಇಲ್ಲಿ ನಿಗದಿಯಾಗಿತ್ತು. ಆದರೆ, ಕೊನೆಯ ಕ್ಷಣಗಳಲ್ಲಿ ರದ್ದಾಗಿದ್ದವು. ಈ ಸಲ ನಿಶ್ಚಿತ ಬರುವ ವಿಶ್ವಾಸ ಹೊಂದಿರುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮಲಪ್ರಭೆಗಳ ಕಾಲುವೆ ನವೀಕರಣ, ಎಂಜನಿಯರಿಂಗ್ ಕಾಲೇಜು ಕಟ್ಟಡಕ್ಕೆ ಅಡಿಗಲ್ಲು, ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಗೆ, 510 ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಡಿಪ್ಲೋಮಾ ಕಾಲೇಜು ಹಾಗೂ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ, ರಡ್ಡೆರನಾಗನೂರಿನ ಸೋಲಾರ್ ಪವರ ಯೋಜನೆಗೆ ಚಾಲನೆ ಸೇರಿದಂತೆ ಒಟ್ಟು ₹ 2 ಸಾವಿರ ಕೋಟಿ ಮೊತ್ತದ 15ಕ್ಕೂ ಹೆಚ್ಚು ಕಾಮಗಾರಿಗೆ ಅವರು ಚಾಲನೆ ನೀಡಲಿದ್ದಾರೆ.
ತಾಲ್ಲೂಕು ಕ್ರೀಡಾಂಗಣದಲ್ಲಿ 25 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಪೆಂಡಾಲ ಹಾಕಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೆ ನೀರಾವರಿ ಕಾಲೊನಿ ಸಮೀಪದ ಗಣೇಶಗುಡಿ ಹತ್ತಿರ ಊಟದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಕೆಲವಡೆ ಗುಂಡಿ ಮುಚ್ಚುವ, ರಸ್ತೆ ದುರಸ್ತಿ ಮಾಡುವ ಕೆಲಸ ಭರದಿಂದ ನಡೆದಿದೆ. ಶನಿವಾರ ಶಾಸಕ ಬಿ.ಆರ್.ಯಾವಗಲ್ ತಾಲ್ಲೂಕು ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದು ಕಾರ್ಯಕ್ರಮ ಸಮರ್ಪಕವಾಗಿ ನಡೆಯಲು ಕ್ರಮ ವಹಿಸುವಂತೆ ಸೂಚಿಸಿದರು. ಮುಖ್ಯಮಂತ್ರಿ ಜತೆಗೆ ಸಚಿವ ರೋಷನ್ ಬೇಗ್, ಡಿ.ಕೆ.ಶಿವಕುಮಾರ, ಕೃಷ್ಣ ಬೈರೇಗೌಡ, ಎಚ್.ಕೆ.ಪಾಟೀಲ ಭಾಗವಹಿಸಲಿ ದ್ದಾರೆ’ ಎಂದು ಯಾವಗಲ್ ತಿಳಿಸಿದರು. ರಾಜು ಕಲಾಲ, ವಿಠ್ಠಲ ಶಿಂಧೆ, ಎಫ್.ವೈ.ದೊಡಮನಿ, ಪ್ರವೀಣ ಯಾವಗಲ್ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.