ADVERTISEMENT

ನಲಿಯುವ ವಯಸ್ಸಿನಲ್ಲಿ ನರಕಯಾತನೆ

ನಾಗರಾಜ ಎಸ್‌.ಹಣಗಿ
Published 27 ಫೆಬ್ರುವರಿ 2013, 8:52 IST
Last Updated 27 ಫೆಬ್ರುವರಿ 2013, 8:52 IST
ಅನಾರೋಗ್ಯ ಪೀಡಿತ ಮಗಳು ಗಾಯತ್ರಿಯೊಂದಿಗೆ ತಾಯಿ ಶೈಲಾ ಬಾರಕೇರ
ಅನಾರೋಗ್ಯ ಪೀಡಿತ ಮಗಳು ಗಾಯತ್ರಿಯೊಂದಿಗೆ ತಾಯಿ ಶೈಲಾ ಬಾರಕೇರ   

ಲಕ್ಷ್ಮೇಶ್ವರ:  ಈ ಬಾಲಕಿಗೆ ಕೇವಲ ನಾಲ್ಕು ವರ್ಷ. ತಿಂದುಂಡು ತಾಯಿಯ ಮಡಿಲಲ್ಲಿ ಚೆನ್ನಾಗಿ ಆಡುತ್ತಾ ಬೆಳೆಯ ಬೇಕಾದ ವಯಸ್ಸು. ಆದರೆ, ಈ ಬಾಲಕಿಯ ಬದುಕು ಮಿದುಳು ಕಾಯಿಲೆಯಿಂದ ನಲುಗಿ ಹೋಗಿದೆ. ಮಗಳ ದುಃಸ್ಥಿತಿ ಕಂಡ ಬಾಲಕಿಯ ತಂದೆ - ತಾಯಿ ನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ.

ಲಕ್ಷ್ಮೇಶ್ವರದ ಬಾಳೇಶ್ವರಮಠ ದೇವಸ್ಥಾನದ ಹತ್ತಿರ ಇರುವ ಗಾಯತ್ರಿ ಎಂಬ ನಾಲ್ಕು ವರ್ಷದ ಬಾಲಕಿಯ ದುರಂತ ಕಥೆ ಇದು. ಬಡತನದ ಬೇಗೆಯಲ್ಲಿ ಬೇಯುತ್ತಿರುವ ಪಾಲಕರು ಮಗಳನ್ನು ಉಳಿಸಿಕೊಳ್ಳುವುದರ ಸಲುವಾಗಿ ನಿತ್ಯವೂ ಹೆಣಗಾಡುತ್ತಿದ್ದಾರೆ. ಆದರೆ, ಬಡತನದ ಭೂತ ಅವರ ಹೆಗಲೇರಿ ಕುಳಿತಿದ್ದು ಜನ್ಮ ಕೊಟ್ಟ ಮಗಳಿಗೆ ಚಿಕಿತ್ಸೆ ಕೊಡಿಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. 
  
ಬಾಲಕಿಯ ತಾಯಿ ಶೈಲಾ ಮೂಲತಃ ಲಕ್ಷ್ಮೇಶ್ವರದ ನಿಂಗಪ್ಪ ಹೊನ್ನಪ್ಪ ಬಾರಕೇರ ಅವರ ಮಗಳು. ಇವರನ್ನು ಸಮೀಪದ ಕಳಸದ ಮಹಾಂತೇಶ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಶೈಲಾ ಮಹಾಂತೇಶ ದಂಪತಿಗೆ ಜನಿಸಿದ ಮೊದಲ ಮಗಳೇ ಈಗ ಅನಾರೋಗ್ಯದಿಂದ ಬಳಲುತ್ತಿರುವ ಗಾಯತ್ರಿ.

ಹುಟ್ಟಿದಾಗ ಎಲ್ಲ ಮಕ್ಕಳಂತೆ ಆರೋಗ್ಯ ವಾಗಿಯೇ ಇದ್ದ ಪುಟ್ಟ ಬಾಲಕಿ ಗಾಯತ್ರಿ ಬರ ಬರುತ್ತಾ ವಿಚಿತ್ರ ರೋಗದಿಂದ ಬಳಲಳು ಶುರು ಮಾಡಿದಳು. ಆದರೆ, ಈಗ ನಾಲ್ಕು ವರ್ಷ ದಾಟುತ್ತ ಬಂದಿದ್ದರೂ ಇನ್ನೂ ಸರಿಯಾಗಿ ಕುಳಿತುಕೊಳ್ಳಲು ಬರುತ್ತಿಲ್ಲ. ಇನ್ನು ನಡೆಯುವು ದಂತೂ ದೂರದ ಮಾತು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಗಳು ಇದುವರೆಗೂ ಮಾತ ನಾಡುತ್ತಿಲ್ಲ.

ಸದಾ ಬಾಯಲ್ಲಿ ಜೊಲ್ಲು ಸುರಿಸಿಕೊಂಡು ಅಳುತ್ತಿರುತ್ತಾಳೆ. ಮಗಳ ಸ್ಥಿತಿ ಕಂಡು ಗಾಬರಿಗೊಂಡ ಪಾಲಕರು ಲಕ್ಷ್ಮೇಶ್ವರದ ವೈದ್ಯರ ಬಳಿ ತೋರಿಸಿದ್ದಾರೆ. ನಂತರ ಹುಬ್ಬ ಳ್ಳಿಯ ಎಸ್‌ಡಿಂಎ ಆಸ್ಪತ್ರೆಯಲ್ಲಿ ಮಗುವಿನ ತಪಾಸಣೆ ನಡೆಯಿತು. ಅಲ್ಲಿ ವೈದ್ಯರು ಬರೆದುಕೊಟ್ಟ ಔಷಧಗಳನ್ನು ಹಾಕಿದರೂ ಗುಣ ಕಂಡು ಬರಲಿಲ್ಲ. ಬಾಲಕಿ ಗಾಯತ್ರಿ ಆರೋಗ್ಯ ಮತ್ತಷ್ಟು ಹದಗೆಡುತ್ತಾ ಹೋಯಿತು.

ಮತ್ತೆ ಮಗುವನ್ನು ಗದಗನ ಚಿಕ್ಕ ಮಕ್ಕಳ ತಜ್ಞ ಲಖಾನಿ ಅವರ ಹತ್ತಿರ ತೋರಿಸಲಾಗಿ ಅವರು ಮಗು ಮಿದುಳಿನ ಕಾಯಿಲೆಯಿಂದ ಬಳಲುತ್ತಿದೆ ಎಂದು ತಿಳಿಸಿ ಬಾಲಕಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ ಎಂದು ಹೇಳಿದರು.  ಆದರೆ ತಂದೆ ತಾಯಿಗೆ ತೀರದ ಬಡತನ. ಮಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿ ಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿತ್ಯ ಮಗಳ ಪರಿಸ್ಥಿತಿ ಕಂಡು ತಾಯಿ ಶೈಲಾ ದಿನನಿತ್ಯ ಕಣ್ಣೀರು ಸುರಿಸುತ್ತಿದ್ದಾರೆ.

ರೋಗಪೀಡಿತ ಗಾಯತ್ರಿ ಈವರೆಗೆ ಒಂದಗಳು ಅನ್ನವನ್ನೇ ಮುಟ್ಟಿಲ್ಲ. ಕೇವಲ ರಾಗಿ ಗಂಜಿ ಮಾತ್ರ ಇವಳ ಆಹಾರ. ಅಪ್ಪಿತಪ್ಪಿ ಗಟ್ಟಿ ಪದಾರ್ಥ ಬಾಯಿಯಲ್ಲಿ ಹಾಕಿದರೆ ತಕ್ಷಣ ಜೋರಾಗಿ ಅಳಲು ಶುರು ಮಾಡುತ್ತಾಳೆ.  ಹೀಗಾಗಿ ಮಗುವಿಗೆ ರಾಗಿ ಗಂಜಿಯೇ ಗತಿಯಾಗಿದೆ. ಎಲ್ಲ ಮಕ್ಕಳಂತೆ ತಮ್ಮ ಮಗಳೂ ಆಡತ್ತ ಚೆನ್ನಾಗಿ ಬೆಳೆಯಬೇಕು ಎಂದು ಪಾಲಕರು ಪರದಾ ಡುತ್ತಿದ್ದಾರೆ.

ಚಿಕಿತ್ಸೆ ಕೊಡಿಸಲು ಅವರ ಹತ್ತಿರ ಹಣ ಇಲ್ಲ. ಗಾಯತ್ರಿ ಚಿಕಿತ್ಸೆ ಪಡೆದು ಸಾಮಾನ್ಯ ಮಕ್ಕಳಂತೆ ಬದುಕು ಸಾಗಿಸಬೇಕಾದರೆ ಮಗುವಿನ ಚಿಕಿತ್ಸೆಗೆ ಮಾನವೀಯ ಹೃದಯಗಳ ಸಹಾಯಹಸ್ತ ಬೇಕಾಗಿದೆ.

`ಸಹಾಯಹಸ್ತ ಚಾಚಿ'
ಗಾಯತ್ರಿಗೆ ಚಿಕಿತ್ಸೆಗೆ ಸಹಾಯ ಮಾಡಬ ಯಸುವವರು 87222-32847 ಈ ಮೊಬೈಲ್‌ಗೆ ಸಂಪರ್ಕಿಸಬಹುದು. ಇಲ್ಲವೆ ಅಕೌಂಟ್ ನಂಬರ್ 8902444241-9 ಈ ಖಾತೆಗೆ ಹಣ ಕಳುಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.