ADVERTISEMENT

`ಪಿಯುಸಿ ಪರೀಕ್ಷಾ ಸಂಭಾವನೆ ಹೆಚ್ಚಳ'

​ಪ್ರಜಾವಾಣಿ ವಾರ್ತೆ
Published 7 ಜುಲೈ 2013, 11:29 IST
Last Updated 7 ಜುಲೈ 2013, 11:29 IST

ಗದಗ: ಪದವಿಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷಾ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ನಿರತವಾಗುವ ಸಿಬ್ಬಂದಿಗೆ  ಕೊಡ ಮಾಡುವ ಸಂಭಾವನೆ, ದಿನಭತ್ಯೆ ಮತ್ತು ಸಾರಿಗೆ ಭತ್ಯೆ ಇತ್ಯಾದಿ ದರಗಳನ್ನು  ಶೇ 40 ರಷ್ಟು ಹೆಚ್ಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಗೌರವ ಅಧ್ಯಕ್ಷ  ಪ್ರಾಚಾರ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.

ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಸರ್ಕಾರಿ ಆದೇಶ ಸಂಖ್ಯೆ ಇಡಿ40/ಟಿಪಿಯು 2013 ಆದೇಶ ಹೊರಡಿಸಿದ್ದಾರೆ, ಮೂರು ಗಂಟೆ ಅವಧಿಯ ಉತ್ತರ ಪತ್ರಿಕೆ ಮೌಲ್ಯಮಾಪನ ದರವನ್ನು ರೂ. 15ರಿಂದ 21 ಕ್ಕೆ, ದಿನಭತ್ಯೆ ರೂ. 375 ರಿಂದ 525, ಬೆಂಗಳೂರ ನಗರ ಸಾರಿಗೆ ಭತ್ಯೆ ರೂ. 110 ರಿಂದ 154, ಇತರೆ ಸ್ಥಳಗಳಲ್ಲಿ ರೂ. 75 ರಿಂದ 105 ಕ್ಕೆ ಅದೇ ರೀತಿ 3 ಗಂಟೆಯ ಅವಧಿಯ ಕನ್ನಡ ಆವೃತ್ತಿ ಸಹಿತ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತಿಯೊಬ್ಬರಿಗೆ ನೀಡುವ ಸಂಭಾವನೆ ರೂ. 1,111 ರಿಂದ 1,555 ಕ್ಕೆ ಹೆಚ್ಚಿಸಿ ಆಜ್ಞೆ ಹೊರಡಿಸಲಾಗಿದೆ.

ಇದು ಅಲ್ಲದೆ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯಮಾಡುವ ಮತ್ತು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿ ಸಂಭಾವನೆಗಳನ್ನು ಕೂಡಾ ಹೆಚ್ಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರು ತಿಂಗಳಿಂದ ಇತ್ಯರ್ಥವಾಗದೆ ಹಾಗೆ ಉಳಿದ ಸಮಸ್ಯೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆಸಕ್ತಿವಹಿಸಿ ಆದೇಶ ಹೊರಡಿಸಲು ಕ್ರಮ ಕೈಕೊಂಡಿದ್ದರಿಂದ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಕಾರ್ಯಾಧ್ಯಕ್ಷ ಪ್ರಾಚಾರ್ಯ ಲಿಂಗಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಬಿ. ಆರ್. ರಾಠೋಡ, ಜಿಲ್ಲಾ ಕಾರ್ಯಾಧ್ಯಕ್ಷ ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಪ್ರೊ. ಅಶೋಕ ಅಂಗಡಿ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.