ನರಗುಂದ: ಕಳೆದ ಮೂರು ದಶಕ ಗಳಿಂದ ರೈತರ ಬೇಡಿಕೆ ಆಗಿರುವ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಮಹಾದಾಯಿ ಹೋರಾಟ ಸಮಿತಿ ಹಾಗೂ ರೈತ ಸೇನೆ ಸಮನ್ವಯ ಸಮಿತಿ ನಡೆಸುತ್ತಿರುವ ಹೋರಾಟ ಬುಧವಾರ 700ನೇ ದಿನಕ್ಕೆ ಕಾಲಿಟ್ಟಿತು.
ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಮಾತ ನಾಡಿ, ‘ಉತ್ತರ ಕರ್ನಾಟಕದ ರೈತರ ಬೇಡಿಕೆ ಸುದೀರ್ಘ ಹೋರಾಟ ನಡೆ ದರೂ ಈಡೇರುತ್ತಿಲ್ಲ. ಇದರಿಂದ ಜನಪ್ರತಿನಿಧಿಗಳಿಗೆ ಈ ಯೋಜನೆ ಜಾರಿ ಬೇಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದ ರೈತರ ಬದುಕಿನ ಹೋರಾಟ ವಿಶ್ವದಾಖಲೆ ಬರೆದ ಹೋರಾಟವಾಗಲಿದೆ. ಎಲ್ಲಿಯೂ 700 ದಿನಗಳ ನಿರಂತರ ಧರಣಿ ನಡೆದಿಲ್ಲ. ಇದನ್ನು ಅರಿತಾದರೂ ಸರ್ಕಾರ, ಜನಪ್ರತಿನಿಧಿಗಳು, ನೀರಾವರಿ ತಜ್ಞರು ಚಿಂತನೆ ನಡೆಸಬೇಕು. ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿರುವ ನೀರನ್ನು ಮಹಾದಾಯಿ ಯೋಜನೆ ಮೂಲಕ ಕರ್ನಾಟಕಕ್ಕೆ ನೀಡಬೇಕು. ನ್ಯಾಯ ಮಂಡಳಿ ಅವಧಿ ಕೊನೆಗೊಳ್ಳುತ್ತಿದೆ.
ಈ ಕುರಿತು ಮೂರೂ ರಾಜ್ಯಗಳು ಚಿಂತನೆ ಮಾಡಬೇಕು. ಬೇಡಿಕೆ ಈಡೇರುವವ ರೆಗೂ ನಮ್ಮ ಹೋರಾಟ ನಿರಂತರವಾಗಿ ರುತ್ತದೆ ಎಂದು ಸ್ಪಷ್ಟಪಡಿಸಿದರು.
ಮಹಾದಾಯಿ ಹೋರಾಟ ಸಮಿತಿ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಮಾತನಾಡಿ ಮಹಾದಾಯಿ ಹೋರಾಟ ಕೇವಲ ರೈತರ ಹೋರಾಟವಲ್ಲ, ಸಮಗ್ರ ಉತ್ತರ ಕರ್ನಾಟಕದ ರೈತರ ಬದುಕಿನ ಹೋರಾಟವಾಗಿದೆ. ಈ ಭಾಗದ ಶಾಸಕರು, ಸಂಸದರು ಮಹಾದಾಯಿ ಕುರಿತು ಪ್ರಧಾನಿ ಬಳಿ ನಿಯೋಗ ಕೊಂಡೊಯ್ದು ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು ಎಂದರು.
ಚಂದ್ರಗೌಡ ಪಾಟೀಲ, ಪರಶುರಾಮ ಜಂಬಗಿ, ವೆಂಕಪ್ಪ ಹುಜರತ್ತಿ, ಜಗನ್ನಾಥ ಮುಧೋಳ, ಹನಮಂತ ಪಡೆಸೂರ, ಬಸಮ್ಮ ಐನಾಪುರ ರತ್ನವ್ವ ಸವಳಭಾವಿ, ಅನಸವ್ವ ಶಿಂಧೆ, ರಾಯವ್ವ ಕಟಗಿ, ಚನ್ನಬಸವ್ವ ಆಯಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.