ADVERTISEMENT

ಬ್ಯಾಂಕ್ ಸಾಲದ ನೋಟಿಸ್ ಸುಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 7:50 IST
Last Updated 3 ಜುಲೈ 2012, 7:50 IST

ರಾಣೆಬೆನ್ನೂರು: ತಾಲ್ಲೂಕು ಸುಣಕಲ್ಲಬಿದರಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ  ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ನವರು ನೀಡಿದ ಸಾಲದ ನೋಟಿಸ್‌ಗಳನ್ನು ಬ್ಯಾಂಕ್ ಆವರಣದಲ್ಲಿ ಸುಡುವುದರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು.

ನಂತರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ತಾಲ್ಲೂಕಿನಾಧ್ಯಂತ ಮಳೆಯಿಲ್ಲದೇ ರೈತರು ಬರಗಾಲ ಎದುರಿಸುತ್ತಿದ್ದಾರೆ.
ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ, ಬ್ಯಾಂಕಿನ ಸಿಬ್ಬಂದಿಗೆ ಮತ್ತು ವಿವಿಧ ಹಣಕಾಸು ಸಂಸ್ಥೆಗಳಿಗೆ ಕಡ್ಡಾಯವಾಗಿ ರೈತರ ಸಾಲ ವಸೂಲಾತಿ ಮಾಡದಂತೆ ಮೌಖಿಕವಾಗಿ ಆದೇಶಿಸಿದ್ದರೂ ಬ್ಯಾಂಕಿನವರು ಸಾಲದ ನೋಟಿಸು ನೀಡಿ ರೈತ ವಿರೋಧಿ ಗಳೆಂದು ಸಾಬೀತಾಗುತ್ತದೆ ಎಂದು ದೂರಿದರು.

ತಾಲ್ಲೂಕಿನಾದ್ಯಂತ ಸಾಲದ ಭಾದೆ ತಾಳಲಾರದೇ 14ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಸಗೊಬ್ಬರ ಕೇಳಿದ ರೈತರನ್ನು ಪೊಲೀಸರು ಹಾವೇರಿಯಲ್ಲಿ ಗುಂಡಿಟ್ಟು ಕೊಂದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಕೇಳಿದ ಕೂಲಿಕಾರ್ಮಿಕರನ್ನು ಸರ್ಕಾರ ಪೊಲೀಸರಿಂದ ಲಾಟಿ ಏಟು ಕೊಡುತ್ತಿದೆ ಎಂದು ದೂರಿದರು.  ಭಾಗ್ಯಜ್ಯೋತಿ ಫಲಾನುವಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿತ್ತಾರೆ, ಒಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ರೈತ ಸಮುದಾಯ ಹಾಗೂ ಕೃಷಿ ಕಾರ್ಮಿಕರ ಮೇಲೆ ಯುದ್ದ ಸಾರಿದಂತಿದೆ.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವ ತನಕ ಕಾಯಬೇಕು ಮತ್ತು ಬಗಾಲ ಬಿದ್ದಿರುವ ಈ ವರ್ಷದಲ್ಲಿ ಕಟ್ಟ ಬಾಕಿದಾರರನ್ನು ಗಣನೆಗೆ ತೆಗೆದುಕೊಳ್ಳದೇ ಪ್ರತಿಯೊಬ್ಬ ರೈತರಿಗೂ 1 ಲಕ್ಷರೂ ಬಡ್ಡಿ ರಹಿತ ಸಾಲ ನೀಡಬೇಕೆಂದು ಆಗ್ರಹಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಜಯಣ್ಣ ಮಾಗನೂರು, ಚಂದ್ರಣ್ಣ ಬೇಡರ, ಬಸಪ್ಪ ಓಲೇಕಾರ, ಭರತ್‌ಗೌಡ ಕಸುಗೂರ, ಶಿವಾನಂದ ಲಿಂಗದಹಳ್ಳಿ, ಸುರೇಶ ಅರಳಿ, ಕೆ.ಬಿ. ಬಣಕಾರ, ಹರಿಹರ ಗೌಡ ಪಾಟೀಲ, ಶಿವಣ್ನ ಜಾನಪ್ಪನವರ, ಎಸ್.ಡಿ. ಹಿರೇಮಠ, ಪ್ರಕಾಶ ತಿಮ್ಮಣ್ಣನವರ, ಬಸವರಾಜ ಬನ್ನೀಹಟ್ಟಿ, ವೀರನಗೌಡ ಮೂಕನಗೌಡ, ಮಂಜಪ್ಪ ಮೂಕನಗೌಡ್ರ, ಬಸವರಾಜ ಮತ್ತೀಹಳ್ಳಿ, ವಿರೇಶ ಪೂಜಾರ, ರಮೇಶ ಹೊಂಬರಡಿ, ನಾಗನಗೌಡ ಮಾಗನೂರು ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.