ADVERTISEMENT

ಭೂಮಾಲೀಕ ಹಕ್ಕಿಗೆ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 10:40 IST
Last Updated 19 ಅಕ್ಟೋಬರ್ 2011, 10:40 IST

ಶಿರಹಟ್ಟಿ: ತಾಲ್ಲೂಕಿನ ಯಲ್ಲಾಪುರ ತಾಂಡಾದ ಲಂಬಾಣಿ ಸಮುದಾಯ ನೂರಾರು ವರ್ಷಗಳಿಂದ ಸರ್ಕಾರದ ಜಮೀನನ್ನು ಸಾಗುವಳಿ ಮಾಡುತ್ತಿದ್ದು, ಸರ್ಕಾರ ತಕ್ಷಣ ಸಾಗುವಳಿ ಮಾಡುತ್ತಿರುವ ಎಲ್ಲ ಬಡಜನತೆಗೆ ಭೂಮಾಲೀಕರು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿ ಬಂಜಾರ ಕಲ್ಯಾಣ ಸಂಘದ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿದರು.

ಯಲ್ಲಾಪುರ ತಾಂಡಾದ ಸುಮಾರು 79 ಕುಟುಂಬಗಳು ಇದೇ ಜಮೀನನ್ನು ನಂಬಿಕೊಂಡು ಉಪಜೀವನ ಮಾಡುತ್ತಿದ್ದು, ಇದನ್ನು ಹೊರತುಪಡಿಸಿ ಯಾವ ಜಮೀನುಗಳು ಇಲ್ಲ. ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಘಟಕ ಆಗ್ರಹಿಸಿತು.

ಇಂತಹ ಜಮೀನಿಗೆ ಲಗ್ಗೆ ಹಾಕಿರುವ ಬಾಲೇಹೊಸೂರ ಗ್ರಾಮದ ನಿಂಗಪ್ಪ ಪ್ಯಾಟಿ ಹಾಗೂ ಕೆಲ ವ್ಯಕ್ತಿಗಳು ಈ ಜಮೀನು ನಿಮ್ಮದಲ್ಲ. ಇದನ್ನು ಬಿಟ್ಟುಕೊಡಬೇಕು. ಮತ್ತು ಇದು ಯಲ್ಲಾಪುರ ಗ್ರಾಮಕ್ಕೆ ಸೇರಿದ್ದಾಗಿದೆ ಎಂಬುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ರವಿಕುಮಾರ ಈ ಸಂದರ್ಭದಲ್ಲಿ ಆರೋಪಿಸಿದರು.

ಜೀವ ಬೆದರಿಕೆ ಹಾಕುವುದು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಹೊಲದಲ್ಲಿ ಬೆಳೆದ ಬೆಳೆಯನ್ನು ನಾಶಮಾಡುವುದು ಸೇರಿದಂತೆ ಅನೇಕ ವಿಕೃತ ಕಾರ್ಯಗಳಲ್ಲಿ ತೊಡಗಿರುವ ಕೆಲ ವ್ಯಕ್ತಿಗಳ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂತಹ ವ್ಯಕ್ತಿಗಳ ವಿರುದ್ದ ಸರ್ಕಾರ ನಿಗಾ ಇಡಬೇಕು ಮತ್ತು, ಅನ್ಯಾಯಕ್ಕೆ ಒಳಗಾದ ಲಂಬಾಣಿ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ನಿಗದಿತ ಅವಧಿಯೊಳಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಅಂಗಡಿ, ಟಿ.ಎಚ್. ಕಾರಬಾರಿ, ಐ.ಎಸ್. ಪೂಜಾರ, ಚಂದ್ರಕಾಂತ ಚವ್ಹಾಣ, ಜಾನು ಲಮಾಣಿ, ಈಶ್ವರ ಲಮಾಣಿ, ಜಯ ಕರ್ನಾಟಕ ವೇದಿಕೆ ರಾಜ್ಯ ಘಟಕದ ಉಪಾಧ್ಯಕ್ಷ ಈಶಪ್ಪ ನಾಯ್ಕರ, ಕಿರಣ ಲಮಾಣಿ, ಪುಂಡಲೀಕ ಲಮಾಣಿ, ಸೋಮು ಲಮಾಣಿ, ಎಂ.ಜಿ. ಲಮಾಣಿ, ರವಿ ಲಮಾಣಿ, ಸೋಮಲಪ್ಪ ಲಮಾಣಿ, ಕೃಷ್ಣ ಮಾಳಗಿಮನಿ, ರವಿ ಮಾಳಗಿಮನಿ, ಮಾರುತಿ ಲಮಾಣಿ, ಮುತ್ತಪ್ಪ ಲಮಾಣಿ, ದ್ಯಾಮಣ್ಣ ಲಮಾಣಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.