ಗದಗ: ‘ಮತದಾರರ ಪಟ್ಟಿಯಲ್ಲಿರುವ ಯಾರೂ ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾ ಸ್ವೀಪ್ ಸಮಿತಿಯು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನುಆಯೋಜಿಸುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಮನೋಜ್ ಜೈನ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸ್ವೀಪ್ ಸಮಿತಿ ಆಯೋಜಿಸಿದ್ದ ಮತದಾರರ ಜಾಗೃತಿಗಾಗಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾಗಿರುವ ಮತಗಟ್ಟೆಗಳನ್ನು ಗುರುತಿಸಿ, ಅಂತಹ 20 ಗ್ರಾಮಗಳಲ್ಲಿ ಬೀದಿ ನಾಟಕ, ಕಿರು ಚಿತ್ರ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಗುವುದು. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಲು. ಮತದಾನಕ್ಕೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಆಯಾ ಗ್ರಾಮ, ನಗರ ಪ್ರದೇಶದ ಜನರು, ಗ್ರಾಮ ಪಂಚಾಯ್ತಿ, ನಗರ, ಪಟ್ಟಣ, ಪುರಸಭೆ, ಪಂಚಾಯ್ತಿ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು’ ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಮಂಜುನಾಥ ಚವ್ಹಾಣ, ನೋಡಲ್ ಅಧಿಕಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ ಮಾತನಾಡಿದರು.
ಎಸ್ಪಿ ಕೆ.ಸಂತೋಷ ಬಾಬು, ವಿಜಯಕುಮಾರ ಬೆಟಗೇರಿ, ಶೇಖರಪ್ಪ ಕುರ್ತಕೋಟಿ, ಕೋತಬಾಳದ ಬಸವ ಬಳಗ ತಂಡದ ಕಲಾವಿದರು ಇದ್ದರು.
ಮತದಾರರ ಜಾಗೃತಿ ಕಾರ್ಯಕ್ರಮ ಏ. 11ರಂದು ಬೆಳಿಗ್ಗೆ 10ಕ್ಕೆ ಬೆಟಗೇರಿಯ ಎಚ್.ಪಿ.ಎಸ್. ಶಾಲೆಯ ಹತ್ತಿರ, ಮಧ್ಯಾಹ್ನ 3ಕ್ಕೆ ಮಣ್ಣು ಪರೀಕ್ಷಾ ಕೇಂದ್ರದ ಹತ್ತಿರ, ಸಂಜೆ 6ಕ್ಕೆ ಅಡವಿಸೋಮಾಪುರ ತಾಂಡೆ, 13ರಂದು ಬೆಳಿಗ್ಗೆ 10ಕ್ಕೆ ರೋಣದ ಕೆ.ಇ.ಬಿ. ಕಚೇರಿ, ಮಧ್ಯಾಹ್ನ 3ಕ್ಕೆ ರೋಣದ ಶಾಂತಗಿರಿ ಮಠ ಪ್ರೌಢಶಾಲೆ, ಸಂಜೆ 6ಕ್ಕೆ ಹೊಳೆಮಣ್ಣೂರ ಪ್ರೌಢಶಾಲೆ, ಏ. 14ರಂದು ಬೆಳಿಗ್ಗೆ 10ಕ್ಕೆ ಹೊಳೆಆಲೂರು ಗ್ರಾಮ ಪಂಚಾಯ್ತಿ, ಮಧ್ಯಾಹ್ನ 3ಕ್ಕೆ ಹಿರಿಯ ಪ್ರಾಥಮಿಕ ಶಾಲೆ, 6ಕ್ಕೆ ಪ್ರಾಥಮಿಕ ಶಾಲೆಯಲ್ಲಿ ಹಾಗೂ 16ರಂದು ಬೆಳಿಗ್ಗೆ 10ಕ್ಕೆ ನರೇಗಲ್ನ ಹಿರಿಯ ಪ್ರಾಥಮಿಕ ಶಾಲೆ, ಮಧ್ಯಾಹ್ನ 3ಕ್ಕೆ ಗಜೇಂದ್ರಗಡ, 17ರಂದು ಬೆಳಿಗ್ಗೆ 10ಕ್ಕೆ ಮುಂಡರಗಿಯ ತಾಲ್ಲೂಕು ಪಂಚಾಯ್ತಿ, ಮಧ್ಯಾಹ್ನ 3ಕ್ಕೆ ಬಾಲಕಿಯ ಪ್ರೌಢಶಾಲೆ, ಸಂಜೆ 6ಕ್ಕೆ ತಾಲ್ಲೂಕು ಪಂಚಾಯ್ತಿ ಮುಂಡರಗಿ, ಸಂಜೆ 7ಕ್ಕೆ ಶಿವಾಜಿ ನಗರ, 18ರಂದು ಬೆಳಿಗ್ಗೆ 10ಕ್ಕೆ ಶಿರಹಟ್ಟಿ ತಾಲ್ಲೂಕಿನ ರಣತೂರು, ಮಧ್ಯಾಹ್ನ 3ಕ್ಕೆ ಲಕ್ಷ್ಮೇಶ್ವರದ ಬಾಲಕಿಯರ ಪ್ರೌಢಶಾಲೆ ಹತ್ತಿರ ಬೀದಿ ನಾಟಕಗಳ ಪ್ರದರ್ಶನ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.