ADVERTISEMENT

ಮತ್ತೆ ಚಿಗುರೊಡೆದ ಹತ್ತಿ ‘ಜಾದೂ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 6:06 IST
Last Updated 17 ಡಿಸೆಂಬರ್ 2013, 6:06 IST
ಹತ್ತಿ ಬಿಡಿಸಿದ ಮೇಲೂ ಮತ್ತೆ ಚಿಗುರೊಡೆದು ಕಾಯಿ ಬಿಟ್ಟಿರುವುದನ್ನು ತೋರಿಸುತ್ತಿರುವ ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯ ಸಾವಯವ ಕೃಷಿಕ ಶಿವಾನಂದ ಮೂಲಿಮನಿ.
ಹತ್ತಿ ಬಿಡಿಸಿದ ಮೇಲೂ ಮತ್ತೆ ಚಿಗುರೊಡೆದು ಕಾಯಿ ಬಿಟ್ಟಿರುವುದನ್ನು ತೋರಿಸುತ್ತಿರುವ ಲಕ್ಷ್ಮೇಶ್ವರ ಸಮೀಪದ ಶಿಗ್ಲಿಯ ಸಾವಯವ ಕೃಷಿಕ ಶಿವಾನಂದ ಮೂಲಿಮನಿ.   

ಲಕ್ಷ್ಮೇಶ್ವರ: ಸಿಕಂದರಾಬಾದ್‌ನ ಕಾವೇರಿ ಕಂಪೆನಿಯ ‘ಜಾದೂ’ ಬಿಟಿ ಹತ್ತಿ ತಳಿ ಮತ್ತೆ ಚಿಗುರೊಡೆಯುವ ಮೂಲಕ ರೈತರಿಗೆ ಲಾಭ ತಂದುಕೊಡುತ್ತಿದೆ.

‘ಜಾದೂ’ ಬಿತ್ತನೆ ಮಾಡಿದ್ದ ಸಮೀಪದ ಶಿಗ್ಲಿಯ ಸಾವಯವ ಕೃಷಿಕ ಶಿವಾನಂದ ಮೂಲಿಮನಿ ಕೈತುಂಬಾ ಹಣ ಗಳಿಸಿದ್ದಾರೆ.
ಒಡೆಯರಮಲ್ಲಾಪುರ ಹತ್ತಿರದ ಏಳು ಎಕರೆಯಲ್ಲಿ ಮೂಲಿಮನಿ  ಮೂರು ವರ್ಷಗಳಿಂದ ‘ಜಾದೂ’ ಬಿಟಿ ಹತ್ತಿ ಬೆಳೆಯುತ್ತಿದ್ದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ.  ಮೇ ಕೊನೆ ವಾರದಲ್ಲಿ ನೀರಾವರಿ ಸೌಲಭ್ಯ ಇರುವ ಏಳು ಎಕರೆಯಲ್ಲಿ ಇವರು ‘ಜಾದೂ’ ಹತ್ತಿ ಬೀಜ ಬಿತ್ತನೆ ಮಾಡಿದ್ದರು. ಆಳೆತ್ತರಕ್ಕೆ ಬೆಳೆದಿರುವ ಹತ್ತಿ ಗಿಡ ಉತ್ತಮ ಇಳುವರಿ ನೀಡುವುದರ ಮೂಲಕ ರೈತರ ಬಾಳಲ್ಲಿ ದೊಡ್ಡ ‘ಜಾದೂ’ ಮಾಡಿದೆ.

ಈಗಾಗಲೇ ಮೂಲಿಮನಿ ಅವರು ಏಳು ಎಕರೆ ಯಲ್ಲಿನ 60–65 ಕ್ವಿಂಟಲ್‌ ಹತ್ತಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿದ್ದಾರೆ. ಇವರ ಹೊಲದಲ್ಲಿನ ಹತ್ತಿ ಗಿಡಗಳು ಚಿಗು ರೊಡೆದು ಮತ್ತೊಮ್ಮೆ ಕಾಯಿ ಬಿಟ್ಟಿದ್ದು ಇದರಿಂದ ಇನ್ನೂ ಹತ್ತು ಕ್ವಿಂಟಲ್‌ ಹತ್ತಿ ಬರುತ್ತದೆ ಎಂದು ಮೂಲಿಮನಿ ಹೇಳುತ್ತಾರೆ.

‘ಜಾದೂ ಹತ್ತಿ ಬೀಜಾ ಭಾಳ ಚಲೋ ಇಳುವರಿ ಕೊಡತೈತ್ರೀ. ಮೂರು ವರ್ಷ ದಿಂದ ನಾವು ಇದನ್ನ ಬೆಳ್ಯಾಕತ್ತೇವಿ. ಹತ್ತಿ ಬಿಡಸದ

ಮುಗದ ಮ್ಯಾಲನೂ ನಮ್ಮ ಹೊಲ್ದಾನ ಗಿಡ ಮತ್ತ ಭಾಳ ಕಾಯಿ ಬಿಟ್ಟಾವು. ಅದರಿಂದ ಕಡಿಮಿ ಅಂದ್ರೂನೂ ಹತ್ತು ಕ್ವಿಂಟಲ್‌ ಹತ್ತಿ ಬಂದ... ಬರತೈತಿ’ ಎಂದು ರೈತ ಶಿವಾನಂದ ಮೂಲಿಮನಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಎಲ್ಲ ರೈತರಂತೆ ಇವರೂ ಮೊದಲು ಕನಕ ಬಿಟಿ ಹತ್ತಿಯನ್ನೆ ಬೆಳೆಯುತ್ತಿದ್ದರು. ಆದರೆ ಮೂರು ವರ್ಷಗಳಿಂದ ‘ಜಾದೂ’ ಬೀಜ ಬಿತ್ತನೆ ಮಾಡುತ್ತಿ ದ್ದಾರೆ. 8–10 ವರ್ಷಗಳಿಂದ ಸಾವ ಯವ ಕೃಷಿ ಮಾಡುತ್ತಿರುವ ಇವರು ಹೆಚ್ಚಾಗಿ ಎರೆಹುಳು ಗೊಬ್ಬರ ಹಾಗೂ ತಿಪ್ಪೆ ಗೊಬ್ಬರವನ್ನು ಬಳಸುತ್ತಾರೆ. ರಾಸಾಯನಿಕ ಗೊಬ್ಬರವನ್ನು ಅತ್ಯಲ್ಪ ಕಡಿಮೆ ಪ್ರಮಾಣದಲ್ಲಿ ಉಪಯೋಗಿ ಸುತ್ತಾರೆ. ಇವರ ಹೊಲದಲ್ಲಿ ಎರಡು ಎರೆಹುಳು ತೊಟ್ಟಿಗಳಿದ್ದು ಅವುಗಳಿಂದ ಹೊಲಕ್ಕೆ ಸಾಕಾಗುವಷ್ಟು ಗೊಬ್ಬರ ಲಭಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT