ADVERTISEMENT

ಮನುಷ್ಯನಿಗೆ ಅಧ್ಯಾತ್ಮ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:10 IST
Last Updated 18 ಫೆಬ್ರುವರಿ 2011, 9:10 IST

ಶಿರಹಟ್ಟಿ: ‘ನಿತ್ಯದ ಯಾಂತ್ರಿಕ ಬದುಕಿನಿಂದ ಮನುಷ್ಯ ಮನುಷ್ಯತ್ವವನ್ನು ಕಳೆದುಕೊಂಡು ಕೇವಲ ಐಶ್ಚರ್ಯಗಳಿಗಾಗಿ ಮಾತ್ರ ಹಂಬಲಿಸುತ್ತಿದ್ದಾನೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಶ್ರೀಗಳು ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ವಿಠ್ಠಲ ಹರಿಮಂದಿರದಲ್ಲಿ ಇತ್ತೀಚೆಗೆ ಜರುಗಿದ ಸಂತ ಶಿರೋಮಣಿ ತುಕಾರಾಮ ಮಹಾರಾಜರ ಗುರು ಉಪದೇಶ ನಿಮಿತ್ತ ಹಮ್ಮಿಕೊಂಡ ದಿಂಡಿ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

 ‘ಆಧುನಿಕ ಬದುಕಿನಿಂದಾಗಿ ಮಾನಸಿಕ ನೆಮ್ಮದಿ ಎಂಬುದು ನಿಲುಕಲಾಗದ ನಕ್ಷತ್ರವಾಗಿದೆ. ಇದಕ್ಕಾಗಿ ಬದುಕಿನಲ್ಲಿ ಶಾಂತಿ, ನೆಮ್ಮದಿಗಾಗಿ ಮನುಷ್ಯ ತಹತಹಿಸುತ್ತಿದ್ದಾನೆ’ ಎಂದು ಅವರು ಹೇಳಿದರು. ‘ದಿನದ ಕೆಲ ಸಮಯ ಭಗವಂತನ ಸ್ಮರಣೆಯಲ್ಲಿ ಕಳೆಯುವುದರಿಂದ ಮನಸ್ಸು ಮುದಗೊಳ್ಳುತ್ತದೆ. ಇದಕ್ಕಾಗಿ ಭಗವಂತನ ಧ್ಯಾನಕ್ಕಾಗಿ ಸ್ವಲ್ಪ ಸಮಯ ಮೀಸಲಿಡಿ’ ಎಂದು ಅವರು ಸಲಹೆ ನೀಡಿದರು.

 ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕಿ ಉಷಾ ಹಿರೇಮಠ ಸಂತ ತುಕಾರಾಮ ಮಹಾರಾಜರ ಕುರಿತು ಉಪನ್ಯಾಸ ನೀಡಿದರು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ನಾಗೇಶ ಮುಧೋಳಕರ, ಸೀಮಣ್ಣ ಅಕ್ಕಿ, ಬಸವರಾಜ ಹೊಸೂರ, ಎಸ್.ಬಿ. ಖೋಕಲೆ, ಚಂದ್ರಕಾಂತ ಬೇದ್ರೆ, ಸತೀಶ ಮುಧೋಳಕರ, ವಿಷ್ಣು ಮುಧೋಳಕರ ಹಾಜರಿದ್ದರು. ಡಾ. ಟಿ.ಎಂ. ಮಹೇಂದ್ರಕರ ಸ್ವಾಗತಿಸಿದರು. ಎಸ್.ಎಂ. ಮಹೇಂದ್ರಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.