ADVERTISEMENT

ಲಕ್ಷ್ಮೇಶ್ವರ: ಮುಗಿಲು ಮುಟ್ಟಿದ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮೇ 2018, 11:40 IST
Last Updated 16 ಮೇ 2018, 11:40 IST

ಲಕ್ಷ್ಮೇಶ್ವರ: ಶಿರಹಟ್ಟಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ವಿಜಯೋತ್ಸವ ಮುಗಿಲು ಮುಟ್ಟಿತ್ತು.

ಲಮಾಣಿ ಗೆಲುವು ಸಾಧಿಸಿದ್ದಾರೆ ಎಂಬ ಸುದ್ದಿ ಹರಡುತ್ತಲೇ ಲಕ್ಷ್ಮೇಶ್ವರದಲ್ಲಿ ನೂರಾರು ಕಾರ್ಯಕರ್ತರು ಪಟ್ಟಣದ ವಿವಿಧ ವರ್ತುಲ ಹಾಗೂ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿಕೊಂಡು ಸಿಹಿ ಸವಿದು ಸಂಭ್ರಮಿಸಿದರು.

ಅದರಂತೆ ಸುತ್ತಮುತ್ತಲಿನ ಐದಾರು ಲಂಬಾಣಿ ತಾಂಡಾಗಳಿಂದ ಟಂಟಂನಲ್ಲಿ ಕಾರ್ಯಕರ್ತರು ಲಕ್ಷ್ಮೇಶ್ವರದ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರಲ್ಲದೆ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಲಮಾಣಿ ಅವರಿಗೆ ಶುಭ ಕೋರಿದ್ದು ವಿಶೇಷವಾಗಿತ್ತು.

ADVERTISEMENT

ಯುವಕರು ಬಿಜೆಪಿ ಬಾವುಟಗಳನ್ನು ಹಿಡಿದು ಹತ್ತಾರು ಬೈಕ್‌ಗಳಲ್ಲಿ ಪಟ್ಟಣದ ತುಂಬೆಲ್ಲ ಸುತ್ತಾಡಿ ‘ಮೋದಿಗೆ ಜಯವಾಗಲಿ, ರಾಮಣ್ಣ ಲಮಾಣಿ ಅವರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.

ಯುವಕರ ದಂಡು ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರ ನಿವಾಸಕ್ಕೆ ತೆರಳಿ ಅವರಿಗೆ ಬಣ್ಣ ಹಚ್ಚಿ ಖುಷಿ ಪಟ್ಟರು.

ರಾಮಣ್ಣ ಲಮಾಣಿ ಅವರು ಗದಗದಿಂದ ಬರುತ್ತಿದ್ದಂತೆ ಆಯಾ ಊರಿನ ಜನರು ಆದರದಿಂದ ಸ್ವಾಗತಿಸಿ ಮೆರವಣಿಗೆ ಮಾಡಿ ಸಂತೋಷ ಹಂಚಿಕೊಂಡರು.

ಡಾ.ವೈ.ಎಫ್‌. ಹಂಜಿ, ನವೀನ ಹಿರೇಮಠ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಸುಭಾಷ ಬಟಗುರ್ಕಿ, ಬಸಣ್ಣ ಹತ್ತಿಕಾಳ, ನಾಗರಾಜ ಚಿಂಚಲಿ, ಪುರಸಭೆ ಅಧ್ಯಕ್ಷ ಎಂ.ಆರ್‌. ಪಾಟೀಲ, ಸದಸ್ಯರಾದ ಗಣೇಶ ಬೇವಿನಮರದ, ಮಹೇಶ ಹೊಗೆಸೊಪ್ಪಿನ, ಗುರುಪುತ್ರ ಮೆಡ್ಲೇರಿ, ರಾಮಣ್ಣ ರಿತ್ತಿ, ಅನಿಲ ಮುಳಗುಂದ, ನಾಗಪ್ಪ ಓಂಕಾರಿ, ಡಿ.ವೈ. ಹುನಗುಂದ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಅಣ್ಣಿಗೇರಿ, ನಗರ ಘಟಕದ ಅಧ್ಯಕ್ಷ ಗಂಗಾಧರ ಮೆಣಸಿನಕಾಯಿ, ಶಿವಯೋಗಿ ಅಂಕಲಕೋಟಿ, ಸಿದ್ದನಗೌಡ ಬಳ್ಳೊಳ್ಳಿ, ಟೋಪಣ್ಣ ಲಮಾಣಿ ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.