ಗದಗ: ಕರ್ನಾಟಕದ ತಿರುಪತಿ ಎಂದೇ ಹೆಸರಾಗಿರುವ ತಾಲ್ಲೂಕಿನ ವೆಂಕಟಾಪುರದಲ್ಲಿ ಲೋಕ ಕಲ್ಯಾಣಕ್ಕಾಗಿ ಹಾಗೂ ಆರೋಗ್ಯವರ್ಧನೆಗಾಗಿ 1008 ಸತ್ಯನಾರಾಯಣ ಪೂಜೆ ಹಾಗೂ ಧನ್ವಂತರಿ ಹೋಮ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತು.
ಧನ್ವಂತರಿ ಹೋಮವನ್ನು ವಿಪ್ರೋತ್ತಮ ಎಚ್. ಕೃಷ್ಣಮೂರ್ತಿ ಹಾಗೂ ವೈದ್ಯ ಬಾಬುರಾವ್ ಕುಲಕರ್ಣಿ ನೇತೃತ್ವದಲ್ಲಿ ನಡೆಯಿತು. ಬೆಳಿಗ್ಗೆ ಲಕ್ಷ್ಮೀದೇವಿ ಪದ್ಮಾವತಿ ಪೂರ್ಣ ವೆಂಕಟೇಶ್ವರರ ಮೂರ್ತಿಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸತ್ಯನಾರಾಯಣ ಪೂಜೆ ಹಾಗೂ ಧನ್ವಂತರಿ ಹೋಮದಲ್ಲಿ ಸಹಸ್ರ ಶಂಖ ಕ್ಷೀರಾಭಿಷೇಕ, ಪ್ರಾಣ ದೇವರಿಗೆ ಮಧು ಅಭಿಷೇಕ, ಲಕ್ಷ್ಮೀದೇವಿಗೆ ಕುಂಕುಮಾರ್ಚನೆ ಹಾಗೂ ಸಗ್ರಹ ಮುಖ ಮಹಾಮೃತ್ಯುಂಜಯ ಹೋಮ ನಡೆಸಿದ 1008 ಭಕ್ತರು ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೂಡಲಿ ಶೃಂಗೇರಿ ಸಂಸ್ಥಾನ ಮಠಾಧೀಶ್ವರರಾದ ಡಾ. ವಿದ್ಯಾ ಅಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಪ್ರತಿಯೊಬ್ಬರೂ ಸಮಾಜದಲ್ಲಿ ಧರ್ಮವಂತರಾಗಿ ಬದುಕಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅನಂತ ಕುಲಕರ್ಣಿ, ಕೃಷ್ಣಮೂರ್ತಿ, ಬಾಬುರಾವ್ ಕುಲಕರ್ಣಿ, ವಿ.ಎಲ್. ಪೂಜಾರ, ಎ.ಕೆ. ತಮ್ಮಣ್ಣವರ, ಬಿ.ಆರ್. ಇನಾಮದಾರ್, ಶ್ರೀನಿವಾಸರಾವ್ ಕುಲಕರ್ಣಿ ಮತ್ತಿತರರು ಹಾಜರಿದ್ದರು. ಉಲ್ಲಾಸರಾವ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.