ADVERTISEMENT

ವಚನ ಸಾಹಿತ್ಯ ರಕ್ಷಣೆಗೆ ಗೊರುಚ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 10:10 IST
Last Updated 2 ಜೂನ್ 2011, 10:10 IST

ಗದಗ: `ಆಗಾಧ ಸಂಪತ್ತನ್ನು ಹೊಂದಿರುವ ವಚನ ಸಾಹಿತ್ಯ ಇಂದು ನಶಿಸುತ್ತಿದೆ~ ಎಂದು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ. ಫ.ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಪಂಚಾಕ್ಷರ ಪಟ್ಟಾಧ್ಯಕ್ಷರ ಜನಕಲ್ಯಾಣ ಪ್ರತಿಷ್ಠಾನ ಹಾಗೂ ವೀರೇಶ್ವರ ಪುಣ್ಯಾಶ್ರಮ ಸಹಯೋಗದಲ್ಲಿ ಹಳಕಟ್ಟಿ ವಚನೋತ್ಸವ- 2011 ರಾಜ್ಯ ಮಟ್ಟದ 5ನೇ ಸಮ್ಮೇಳನದ ಸಮಾರೋಪದಲ್ಲಿ ಸಮ್ಮೇಳನಾ ಧ್ಯಕ್ಷರಾಗಿ ಅವರು ಈಚೆಗೆ  ಮಾತನಾಡಿದರು.

`ವಚನ ಸಾಹಿತ್ಯದಲ್ಲಿ ಐತಿಹಾಸಿಕ ಹಿನ್ನೆಲೆ, ಮೂಢನಂಬಿಕೆಗಳ ಕುರಿತು ತಿಳಿವಳಿಕೆ, ಸಂಸ್ಕೃತಿ, ಸಾಮಾಜಿಕ ಚಿಂತನೆ, ಸಮೃದ್ಧಿಯ ಜತೆಗೆ ಜೀವನಕ್ಕೆ ಗುರಿ ತೋರಿಸಿಕೊಡುವ ಅಂಶವಿದೆ. ಆದರೆ, ಇಂತಹ ವಚನ ಸಾಹಿತ್ಯ ಇಂದಿನ ದಿನಮಾನದಲ್ಲಿ ಮರೆಯಾಗುತ್ತಿದ್ದು, ಇದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ~ ಎಂದರು.

`ಕಾಯಕದಲ್ಲಿ ತೊಡಗಿಕೊಳ್ಳಬೇಕು. ಕಾಯಕದಲ್ಲಿ ನಿಷ್ಠೆ ಇದ್ದರೆ ಸಕಲವೂ ಲಭ್ಯವಾಗುತ್ತದೆ. ಕಾಯಕವೇ ಕೈಲಾಸ ಎನ್ನುವ ಬಸವಣ್ಣವರ ವಚನ ತತ್ವಗಳು ಮನುಷ್ಯ ಒಂದಿಲ್ಲ ಒಂದು ಕಾರ್ಯದಲ್ಲಿ ತೊಡಗಿದ್ದರೆ ಸಮಾಜದಲ್ಲಿ ಅವನಿಗೊಂದು ಸ್ಥಾನಮಾನ ದೊರಕುತ್ತದೆ ಸಾರಿ ಹೇಳಿವೆ~ ಎಂದರು.

ಈ ಸಂದರ್ಭದಲ್ಲಿ ಕನ್ನಡ ವಿವಿ ಕುಲಪತಿ ಡಾ. ಎಂ. ಮುರಿಗೆಪ್ಪ ಅವರು ಡಾ. ಕರವೀರಪ್ರಭು ಕ್ಯಾಲಕೊಂಡ ಮತ್ತು ಗೊ.ರು. ಚನ್ನಬಸಪ್ಪನವರಿಗೆ ಬೇಂದ್ರೆ ಪ್ರಶಸ್ತಿ ಪ್ರದಾನ ಮಾಡಿದರು.

ಅರವಿಂದ ಓಲ್ತೆ, ಡಾ. ಶಿವರಾಜಶಾಸ್ತ್ರಿ ಹೆರೂರ, ಬಸವಾನಂದ ಸ್ವಾಮೀಜಿ, ಡಾ. ಎಂ.ಎನ್. ವಾಲಿ, ಹನುಮಂತಪ್ಪ ಮಲ್ಲೇಪುರೆ ಅವರಿಗೆ ಹಳಕಟ್ಟಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ಬಿ.ಎಫ್. ದಂಡಿನ, ಎಸ್.ಎಂ. ಲಗಳಿ, ಇಸ್ರಾರ್‌ಬಾನು ಬಳ್ಳಾರಿ, ಆರ್.ಬಿ. ಸಂಗಮೇಶ್ವರ ಗವಾಯಿ, ಅರವಿಂದ ಬಂಗಾರಿ, ಡಾ. ಶೇಖರ ಸಜ್ಜನರ ಅವರನ್ನು ಸನ್ಮಾನಿಸಲಾಯಿತು.

ಅಡ್ನೂರ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳಗಾನೂರು ಶಿವಶಾಂತವೀರ ಶರಣರು ಹಾಜರಿದ್ದರು. ಬಿ.ಜಿ. ಹಿರೇಮಠ ನಿರೂಪಿಸಿದರು. ಎಂ.ಎ. ಹಂಚಿನಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.