ADVERTISEMENT

ವಸತಿ ಯೋಜನೆ ಫಲಾನುಭವಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 6:15 IST
Last Updated 7 ಜನವರಿ 2012, 6:15 IST

ಗದಗ: ವಸತಿ ರಹಿತರಿಗೆ ಮನೆ ಒದಗಿಸುವ ಬಸವ ವಸತಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಶಾಸಕರಿಗೆ ನೀಡುವ ಸರ್ಕಾರದ ಪ್ರಸ್ತಾವಿತ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ, ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಹಾಗೂ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಅವರಿಗೆ ಮಾಜಿ ಶಾಸಕ ಡಿ.ಆರ್. ಪಾಟೀಲ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಬಸವ ವಸತಿ ಯೋಜನೆಗಳಲ್ಲಿನ ಫಲಾನುಭವಿಗಳ ಆಯ್ಕೆ ಕರ್ನಾಟಕ ಪಂಚಾಯತ ರಾಜ್ ಕಾಯ್ದೆಯ 2003ರ ತಿದ್ದು ಪಡಿಯ ಕಲಂ 3(3) ರನ್ವಯ ವಾರ್ಡ್ ಸಭೆಗಳು ಹಾಗೂ ನಂತರ ಗ್ರಾಮಸಭೆಗಳ ಮೂಲಕ ನಡೆಯಬೇಕು.
 
ಇದು ಗ್ರಾಮ ಪಂಚಾಯತದ ಹಕ್ಕು. ಈ ಹಕ್ಕನ್ನು ಮೊಟಕುಗೊಳಿಸಿ, ಬಸವ ವಸತಿ ಯೋಜನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವ ಹಕ್ಕು ಸ್ಥಳೀಯ ಶಾಸಕರಿಗೆ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದ್ದು, ಒಂದು ವೇಳೆ ಈ ರೀತಿಯಲ್ಲಿ ಅಧಿಕಾರ ಹಸ್ತಾಂತರಿಸಿದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸಂವಿಧಾನ ಬದ್ಧವಾಗಿ ಕೊಡಮಾಡಿದ ಅಧಿಕಾರ ಮೊಟಕುಗೊಳಿಸಿದಂತಾಗುತ್ತದೆ. ಆದ್ದರಿಂದ ಈ ರೀತಿಯ ಆದೇಶ ಬಿಡುಗಡೆಯಾಗದಂತೆ ತಡೆ ಹಿಡಿಯಬೇಕು ಎಂದು ಮನವಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಗದಗ ಜಿಲ್ಲಾ ರಾಜೀವಗಾಂಧಿ ಪಂಚಾಯತ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ನಿಂಗಪ್ಪ ಬೇವಿನಮರದ, ಗ್ರಾಮ ಪಂಚಾಯತದ ಹಕ್ಕೊತ್ತಾಯ ಆಂದೋಲನ ಸಮಿತಿಯ ರಾಜ್ಯ ಸದಸ್ಯ ಎಚ್.ಕೆ. ಭೂಮಕ್ಕನವರ, ಅಪ್ಪಣ್ಣ ಇನಾಮತಿ, ಪರಪ್ಪ ಬಂದಕ್ಕನವರ, ಶಿವಾನಂದ ಮಾದಣ್ಣವರ, ಕೆಂಚಪ್ಪ ಪೂಜಾರ, ರುದ್ರಪ್ಪ ಮುಸ್ಕಿನಬಾವಿ, ಹನುಮಂತಗೌಡ ಪಾಟೀಲ, ಅನಸೂಯಾ ಗುದಗಿ, ಶೇಖಣ್ಣ ಅಗಸಿಮನಿ, ಷಣ್ಮುಖ ಮಲ್ಲಸಮುದ್ರ, ಬಸವರಾಜ ಬ್ಯಾಳಗಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.