ADVERTISEMENT

ವೈಚಾರಿಕತೆ ಬೆಳೆಸಿಕೊಳ್ಳಲು ಹುಲಿಕಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 7:05 IST
Last Updated 13 ಸೆಪ್ಟೆಂಬರ್ 2011, 7:05 IST

ಗದಗ: ಪ್ರತಿಯೊಬ್ಬರೂ ಮೂಢನಂಬಿಕೆ ಹಾಗೂ ಅಂಧಕಾರಗಳಿಂದ ಹೊರಬಂದು ವೈಜ್ಞಾನಿಕ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಹುಲಿಕಲ್ ನಟರಾಜ ಸಲಹೆ ನೀಡಿದರು. ಬೆಟಗೇರಿಯ ಹೆಲ್ತ್‌ಕ್ಯಾಂಪ್‌ನಲ್ಲಿ ಗಜಾನನೋತ್ಸವ ಹಬ್ಬದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಹಲವು ಪವಾಡಗಳ ರಹಸ್ಯ ಬಯಲು ಮಾಡಿ ತೋರಿಸಿ ಮಾತನಾಡಿದರು.

ವೈಜ್ಞಾನಿಕ ಯುಗದಲ್ಲೂ ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿರುವುದು ದುರ್ದೈವದ ಸಂಗತಿ. ಬಾಬಾ, ಅವತಾರ ಪುರುಷರೆಂದು ಹೇಳಿಕೊಂಡು ಪವಾಡಗಳ ಮೂಲಕ ಮುಗ್ದ ಜನರನ್ನು ಮೋಸಗೊಳಿಸಲಾಗುತ್ತದೆ ಎಂದು ಹೇಳಿದರು.

ಕಣ್ಕಟ್ಟು, ಕೈಚಳಕ ಮೂಲಕ ಜನರನ್ನು ನಂಬಿಸಿ ವಂಚನೆ ಮಾಡುವ ಡೋಂಗಿ ಬಾಬಾಗಳನ್ನು ನಂಬಬೇಡಿ ಅಂಥವರ ವಿರುದ್ಧ ಎಚ್ಚರವಾಗಿರಿ ಎಂದು ಅವರು ಸಲಹೆ ನೀಡಿದರು. ತನ್ನಿಂದ ತಾನೆ ಉರಿಯುವ ಜ್ಯೋತಿ, ನೀರಿನಲ್ಲಿ ದೀಪ, ಕೈಯಲ್ಲಿ ಕರ್ಪೂರ ಉರಿಸುವುದು, ಮೈ ಮೇಲೆ ಬೆಂಕಿ ಹೊತ್ತಿಸಿಕೊಂಡು ಉರಿವ ಬೆಂಕಿಯನ್ನೇ ಬಾಯಲ್ಲಿ ಹಾಕಿಕೊಂಡು ಅಚ್ಚರಿ ಮೂಡಿಸಿದ ನಟರಾಜ ಅವರು ಅವುಗಳ ಹಿಂದಿನ ವೈಜ್ಞಾನಿಕ ಸತ್ಯದ ಕುರಿತು ಅರಿವು ಮೂಡಿಸಿದರು.

ಅನಿಲ ತೆಂಬದಮನಿ ಮತ್ತಿತರರು ಹಾಜರಿದ್ದರು. ಹೆಲ್ತ್‌ಕ್ಯಾಂಪ್ ಯುವಕ ಸಂಘದ ಅಧ್ಯಕ್ಷ ಅರವಿಂದ ಹುಲ್ಲೂರ ಸ್ವಾಗತಿಸಿದರು. ರಾಮಚಂದ್ರ ದೇವೂರಕರ  ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.