ನರಗುಂದ: ಮಹದಾಯಿ ಹೋರಾಟಕ್ಕೆ ಹಲವಾರು ಸಂಘಟನೆಗಳು ಬೆಂಬಲ ನೀಡಿವೆ. ಆದರೆ, ಸರ್ಕಾರಗಳೇ ಇದಕ್ಕೆಸರಿಯಾಗಿ ಸ್ಪಂದಿಸುತ್ತಿಲ್ಲ. ನ್ಯಾಯ ಮಂಡಳಿ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸೂಚಿಸಿದೆ. ಮಹದಾಯಿ ಸಂಧಾನಕ್ಕೆ ವೇದಿಕೆ ನಿರ್ಮಿಸಲು ಆಗದಿದ್ದರೆ, ಜನಪ್ರತಿನಿಧಿಗಳು ರಾಜೀ
ನಾಮೆ ನೀಡಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಶ್ರೀಶೈಲ ಮೇಟಿ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆದ ಮಹದಾಯಿ ಧರಣಿಯ 821ನೇ ದಿನ ಶುಕ್ರವಾರ ಅವರು ಮಾತನಾಡಿದರು. ‘ಪ್ರಧಾನಿ ಮೋದಿ ಅವರ ಮೇಲಿಟ್ಟ ಭರವಸೆ ಹುಸಿಯಾಗುತ್ತಿದೆ. ನಮ್ಮ ಮಹದಾಯಿ ನೀರು ನಮಗೆ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಸಹಕರಿಸಿದ ರಾಜಕಾರಣಿಗಳಿಗೆ ಮುಂಬರುವ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುವುದು’ ಎಂದರು.
‘ನ್ಯಾಯಮಂಡಳಿ ಸೂಚನೆಯನ್ನು ಮೂರು ರಾಜ್ಯಗಳೂ ಪಾಲಿಸಬೇಕು. ಪತ್ರ ವ್ಯವಹಾರ ಕೈಬಿಟ್ಟು, ಮುಖಾಮುಖಿ ಭೇಟಿ ಆಗಬೇಕು. ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳ ಸಭೆ ನಡೆಸಿ, ಸಮಸ್ಯೆ ಪರಿಹರಿಸಬೇಕು’ ಎಂದು ಸಮಿತಿ ಸದಸ್ಯ ಕಿತ್ತೂರಿನ ರಮೇಶ ಹದ್ಲಿ ಆಗ್ರಹಿಸಿದರು. ವೀರಬಸಪ್ಪ ಹೂಗಾರ, ಚಂದ್ರಗೌಡ ಪಾಟೀಲ, ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಎಸ್.ಕೆಗಿರಿಯಣ್ಣವರ ಧರಣಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.