ಗದಗ: ನಗರದಲ್ಲಿ ಶುಕ್ರವಾರ ಶಿವಾನಂದ ಸ್ವಾಮಿಗಳ ಜಾತ್ರಾ ರಥೋತ್ಸವ ಸಂಭ್ರಮ ಮತ್ತು ಸಡಗರದಿಂದ ನಡೆಯಿತು.
ನಗರದ ಕಳಸಾಪೂರ ರಸ್ತೆಯಲ್ಲಿರುವ ಶಿವಾನಂದ ಮಠದ ಎದುರಿನ ವಿಶಾಲವಾದ ಮೈದಾನದಲ್ಲಿ ಗದಗ, ಹಾವೇರಿ, ಕೊಪ್ಪಳ ಜಿಲ್ಲೆಳಿಂದ ಆಗಮಿಸಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಸಂಜೆ 6.15ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವ ಸಾಗುವ ವೇಳೆ ಭಕ್ತರಿಂದ ಹರ್ಷೋದ್ಘಾರ ಮತ್ತು ಜೈಕಾರಗಳು ಮೊಳಗಿದವು.
ಮಠದ ಆವರಣದಿಂದ ಪಾದದ ಕಟ್ಟೆವರೆಗೆ ಸಾಗಿ ಮತ್ತೆ ಮಠದ ಬಳಿ ರಥ ಬಂದು ನಿಂತಿತ್ತು. ಉಮಾ ಮಹೇಶ್ವರಿ ಯುವಕ ಮಂಡಳ, ಶಿವಾನಂದ ಯುವಕ ಮಂಡಳ, ಭಜನಾ ಸಂಘಗಳು, ಜಾಂಜ್ ಮೇಳಗಳು ಭಾಗವಹಿಸಿ ರಥೋತ್ಸವಕ್ಕೆ ಮೆರುಗು ನೀಡಿದವು. ಇದಕ್ಕೂ ಮುನ್ನ ಅಭಿನವ ಶಿವಾನಂದ ಸ್ವಾಮಿಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ರಥದ ಗಾಲಿ ತಗುಲಿ ಗಾಯ
ರಥೋತ್ಸವ ಸಾಗುವ ವೇಳೆ ಭಕ್ತರೊಬ್ಬರಿಗೆ ರಥದ ಗಾಲಿ ತಗುಲಿ ಕಾಲಿನ ಹಿಮ್ಮಡಿಗೆ ತೀವ್ರ ಪೆಟ್ಟು ಬಿದ್ದಿದೆ. ಪಾದದ ಕಟ್ಟೆಯಿಂದ ರಥವನ್ನು ಎಳೆಯುವಾಗ ಜನಜಂಗುಳಿ ಉಂಟಾಗಿದೆ. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಸುಣಕಲ್ ಬಿದರಿ ಗ್ರಾಮದ ನಿವೃತ್ತ ಶಿಕ್ಷಕ ಲಿಂಗದಳ್ಳಿ ಮಾಸ್ತರ್ ಅವರ ಹಿಮ್ಮಡಿಗೆ ರಥದ ಗಾಲಿ ತಗುಲಿ ಚರ್ಮ ಕಿತ್ತು ಬಂದು ರಕ್ತ ಸೋರಲು ಆರಂಭಿಸಿತು. ತಕ್ಷಣ ಅವರನ್ನು 108 ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.