ಗಜೇಂದ್ರಗಡ: ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು ಸಮಾಜದ ನಿಯಮ ಹದಗೆಡಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬಾರದು, ಅಂದಾಗ ಮಾತ್ರ ಸಂಘಟನೆಗಳ ಕಾರ್ಯಗಳಿಗೆ ಸಾಮಾಜಿಕ ಮನ್ನಣೆ ದೊರೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.
ಇಲ್ಲಿನ ಮೈಸೂರಮಠದಲ್ಲಿ `ಕರ್ನಾಟಕ ಜನಪರ ಸೇವಾ ಸಮಿತಿ ಗಜೇಂದ್ರಗಡ' ಎಂಬ ನೂತನ ಸಂಘಟನೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಂಘಟನೆಗಳು ಮೌಲ್ಯಾಧಾರಿತ ಕಾರ್ಯಗಳಿಂದ ಬಹು ದೂರ ಉಳಿದು, ಕೇವಲ ಸ್ವಾರ್ಥ ಲಾಭದ ಉದ್ದೇಶವನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿವೆ. ಇದರ ಮುಂದುವರೆದ ಭಾಗವಾಗಿಯೇ ಜನತೆಗೆ ಸಂಘಟನೆಗಳ ಬಗೆಗಿನ ಗೌರವ ಕ್ಷೀಣಿಸಿದೆ ಎಂದರು.
ಸಂಘಟನೆಗಳು ಸಮಾಜ ಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಬೇಕು. ಯಾವುದೇ ಪಕ್ಷ, ಜಾತಿ ಇತ್ಯಾದಿಗಳಿಗೆ ಸಿಮೀತವಾಗಿರದೆ ಸಮಾಜದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯನ್ನಿಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಒಂದು ವ್ಯಕ್ತಿ ಅಥವಾ ಒಂದು ಸಮುದಾಯಕ್ಕೆ ಅನ್ಯಾಯ ವಾಗಿದೆ ಎಂದ ತಕ್ಷಣ ಅದನ್ನು ಪ್ರತಿಭಟಿಸಿ, ನ್ಯಾಯ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನಕ್ಕೆ ಸಂಘಟನೆಗಳು ಮುಂದಾಗಬೇಕು ಎಂದರು.
ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಸ್ವಾರ್ಥಪರ ಚಿಂತನೆಗೆ ಮುಂದಾಗುತ್ತಿರುವುದು ಸಂಘಟನೆಗಳ ಮೇಲಿನ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದರು.ಮೈಸೂರ ಮಠದ ವಿಜಯಮಹಾಂತ ಸ್ವಾಮೀಜಿ, ಜಿ.ಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಗಜೇಂದ್ರಗಡ ವೀರಶೈವ ಸಮಾಜದ ಅಧ್ಯಕ್ಷ ಬಿ.ಎಂ.ಸಜ್ಜನರ, ಹೊಳೆ ಆಲೂರ ಎಪಿಎಂಸಿ ಅಧ್ಯಕ್ಷ ಅಮರೇಶ ಬಳಿಗೇರ ಹಾಜರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.