ADVERTISEMENT

ಸರ್ಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 5:00 IST
Last Updated 2 ಅಕ್ಟೋಬರ್ 2012, 5:00 IST

ನರಗುಂದ: ಈ ಭಾಗದಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಉಂಟಾದರೂ ರಾಜ್ಯ ಸರ್ಕಾರ ಅದನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಘಟಕದ ಕಾರ್ಯಕರ್ತರು ಮಾಜಿ ಸಚಿವ ಬಿ.ಆರ್.ಯಾವಗಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಕೈಗೊಂಡು  ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪುರಸಭೆಯಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದ ಎದುರಿಗೆ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮೇಲೆ ರಸ್ತೆ ತಡೆ ನಡೆಸಿದರು. ಇದರಿಂದ ಕೆಲವು ಕಾಲ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಆರ್. ಯಾವಗಲ್ ~ಬರಗಾಲದಿಂದ ಜನಸಾಮಾನ್ಯರ  ಸ್ಥಿತಿ ಹೇಳ ತೀರದಾಗಿದೆ. ಉದ್ಯೋಗ ಅರಸಿ ಗುಳೆ ಹೊರಟಿದ್ದಾರೆ. ಉದ್ಯೋಗ ಖಾತ್ರಿ  ಆರಂಭವಾಗಿಲ್ಲ. ಸರ್ಕಾರ ಕುರುಡ ಜಾಣತನ ತೋರುವ ಮೂಲಕ  ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮತಕ್ಷೇತ್ರದಲ್ಲಿ ನಿರ್ಮಾಣವಾದ ಆಸರೆ  ಮನೆಗಳು ಸಂಪೂರ್ಣ ಕಳಪೆಯಾಗಿವೆ. ಅದೇ ರೀತಿ ನಗರದ ಪ್ರದೇಶದ ಕಾಮಗಾರಿಗಳು ಕಳಪೆಯಾಗಿದ್ದು ಅವುಗಳ ಬಗ್ಗೆ ತನಿಖೆ ಯಾಗಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂ.ಎಚ್.ಮೊರಬದ, ಚಂಬಣ್ಣ ವಾಳದ, ಎಫ್.ವೈ. ದೊಡಮನಿ,  ರಾಚಪ್ಪ ಅಳಗವಾಡಿ, ಮುತ್ತಪ್ಪ ಕಳಸದ, ಸಿ.ಬಿ. ಪಾಟೀಲ, ದ್ಯಾಮಣ್ಣ ಕಾಡಪ್ಪ ನವರ, ಎಂ.ಎಚ್. ಕರಮಡಿ, ವಿರುಪಾಕ್ಷಪ್ಪ ಸವಳಬಾವಿ, ಫಕೀರಪ್ಪ ಸವದತ್ತಿ, ಮಲ್ಲಪ್ಪ ಭೋವಿ, ಎಚ್.ಎಸ್.ಹೆಬ್ಬಳ್ಳಿ, ಎಸ್.ಆರ್. ರಾಯನಗೌಡ್ರ, ಜಗದೀಶ ಕಗದಾಳ, ಎಸ್.ಬಿ. ದಂಡಿನ,  ರಾಜು ಕಲಾಲ, ವಿಠ್ಠಲ ಶಿಂಧೆ, ಎಂ.ಬಿ.ಮೆಣಸಗಿ ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.