ಗಜೇಂದ್ರಗಡ: ‘ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸಾರಿಗೆ ಇಲಾಖೆಯ ಕಚೇರಿಯನ್ನು ತೆರೆಯಲು ಸರ್ಕಾರ ಸಮ್ಮತಿಸಿದರೆ, ನಮ್ಮ ಅಭ್ಯಂತರವೇನೂ ಇಲ್ಲ’ ಎಂದು ಗದಗ ಜಿಲ್ಲಾ ರಸ್ತೆ ಸಾರಿಗೆ ತನಿಖಾಧಿಕಾರಿ ಎಸ್. ನಾಗರಾಜ ಹೇಳಿದರು. ಹಳೇ ಪ್ರವಾಸಿಮಂದಿರದಲ್ಲಿ ನಡೆದ ವಾಹನ ತಪಾಸಣೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.
‘ಗದಗ ಜಿಲ್ಲೆಯ ರಸ್ತೆ ಸಾರಿಗೆ ಇಲಾಖೆ ಪ್ರತಿ ತಿಂಗಳು ಇಲ್ಲಿ ವಾಹನ ತಪಾಸಣೆ ನಡೆಸುತ್ತದೆ. ಆದರೆ ವಾಹನ ಚಾಲಕರು ಟ್ರಯಲ್ ನೀಡಿ, ಚಾಲನಾ ಪರವಾನಗಿ ಪಡೆಯಲು ಗದಗ ನಗರಕ್ಕೆ ಹೋಗಬೇಕು.
ಆದ್ದರಿಂದ ರೋಣ ತಾಲ್ಲೂಕಿನಲ್ಲಿಯೇ ದೊಡ್ಡದಾದ ಈ ಪಟ್ಟಣದಲ್ಲಿಯೇ ಇಲಾಖೆಯ ಶಾಖಾ ಕಚೇರಿ ತೆರೆದು ಇಲ್ಲಿಗೆ ಪರವಾನಗಿ ನೀಡಬೇಕು. ಈ ಹಿಂದೆ ಇಲ್ಲಿಯೇ ಇದ್ದ ವ್ಯವಸ್ಥೆಯನ್ನು ಮುಂದುವರಿಸಬೇಕು’ ಎಂದು ಪಟ್ಟಣದ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು.
‘ಪರವಾನಗಿ ಕಾರ್ಡ್ಗೆ ಚಾಲಕರು ಕಂಪ್ಯೂಟರ್ ಮೂಲಕ ತಮ್ಮ ಬೆರಳು ಗುರುತು ಕೊಡಬೇಕಾಗುತ್ತದೆ. ಈ ಹಿಂದೆ ಇದು ಗಣಕೀರಣವಾಗಿರಲಿಲ್ಲ. ಹೀಗಾಗಿ ಅದನ್ನು ಇಲ್ಲಿಯೇ ನೀಡುತ್ತಿದ್ದರು. ಆದರೂ ಸರ್ಕಾರ ಶಾಖಾ ಕಚೇರಿಯನ್ನು ಇಲ್ಲಿ ತೆರೆಯುವುದಾದರೆ ನಮ್ಮ ಅಭ್ಯಂತರವಿಲ್ಲ’ ಎಂದು ನಾಗರಾಜ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.