ADVERTISEMENT

ಹದಗೆಟ್ಟ ರೈಲ್ವೆ ಕೆಳಸೇತುವೆ ರಸ್ತೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 6:27 IST
Last Updated 22 ಏಪ್ರಿಲ್ 2013, 6:27 IST

ಗದಗ: ಗದಗ-ಬೆಟಗೇರಿ ಅವಳಿ ನಗರದ ಬಳ್ಳಾರಿ ಗೇಟ್ ರೈಲ್ವೆ ಕೆಳ ಸೇತುವೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಟಗೇರಿಯಿಂದ ಜಿ.ಟಿ.ಕಾಲೇಜಿಗೆ, ಹಾತ ಲಗೇರಿ ನಾಕಾ, ರಾಜೀವ ಗಾಂಧಿನಗರ, ಪಿ ಅಂಡ್ ಟಿ ಕ್ವಾಟರ್ಸ್, ಸಾಯಿಬಾಬಾ ದೇವಸ್ಥಾನ, ಪಂಚಾ ಕ್ಷರ ನಗರ ಸೇರಿದಂತೆ ಇತರೆ ಪ್ರದೇ ಗಳಿಗೆ ಹೋಗಬೇಕಾದರೆ ಈ ರಸ್ತೆ ಪ್ರಮುಖ ಸಂಪರ್ಕ ಸಾಧನ.

ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು, ಸಾರ್ವಜನಿಕರು, ಶಾಲಾ ಮಕ್ಕಳು, ಪಾದಚಾರಿಗಳು ಸಂಚರಿ ಸುತ್ತಾರೆ.  ರಸ್ತೆ ಹಾಳಾಗಿರುವುದರಿಂದ ಜನತೆ ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಾರೆ. ರಸ್ತೆ ತುಂಬ ಗುಂಡಿ ಗಳು ಬಿದ್ದಿವೆ. ಮಣ್ಣು, ಧೂಳಿನಿಂದ ತುಂಬಿಕೊಂಡಿದೆ. ರೈಲ್ವೆ ಕೆಳಸೇತುವೆಯ ಚರಂಡಿ ನೀರು ಸಹ ರಸ್ತೆ ಮೇಲೆ ಹರಿಯುತ್ತಿದೆ. ಬಿಡಾಡಿ ನಾಯಿಗಳು, ಹಂದಿಗಳ ಹಾವಳಿ ದಿನನಿತ್ಯ ಹೆಚ್ಚು ತ್ತಿದೆ. ಇದರಿಂದ ಸಾರ್ವಜನಿಕರು ಸಾಂಕ್ರಮಿಕ ರೋಗ ಹರಡಬಹುದೆಂಬ ಕಾರಣಕ್ಕೆ ಭಯಭೀತಗೊಂಡಿದ್ದಾರೆ.

`ಕಾಟಾಚಾರಕ್ಕೆ ರಸ್ತೆ ಮೇಲೆ ಮಣ್ಣು ಹಾಕಲಾಗುತ್ತಿದೆ. ಮಳೆಗಾಲದಲ್ಲಿ ಮಣ್ಣು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕಾದರೆ ಮಳೆಗಾಲಕ್ಕೂ ಮುನ್ನ ರಸ್ತೆಗೆ ಡಾಂಬ ರೀಕರಣ ಮಾಡಬೇಕು' ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಪ್ರತಿನಿತ್ಯ ಈ ರಸ್ತೆಬದಿಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಲ್ಲುತ್ತವೆ. ರಸ್ತೆಯಲ್ಲಿ ವಾಹನ ಸಂಚರಿಸಿದರೆ ರಸ್ತೆ ತುಂಬ ಧೂಳು ಆವರಿಸಿ ಕೊಳ್ಳುತ್ತದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕು. ಅವಳಿ ನಗರದ ಪ್ರಮುಖ ರಸ್ತೆಯಾಗಿರುವುದರಿಂದ ಶೀಘ್ರ ದುರಸ್ತಿಗೊಳಿಸಿದ್ದರೆ ಮಳೆಗಾಲದಲ್ಲಿ ವಾಹನಗಳು ಸಂಚರಿಸಲು ಪ್ರಯಾಸಪಡಬೇಕು.

ಕೂಡಲೇ ಸಂಬಂಧಪಟ್ಟ ಇಲಾಖೆ ಎಚ್ಚೇತ್ತುಕೊಂಡು ದುರಸ್ತಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜನರ ಒತ್ತಾಯಿಸಿದ್ದಾರೆ.

`ಹಲವು ತಿಂಗಳಿನಿಂದ ಈ ರಸ್ತೆ ದುರಸ್ತಿ ಮಾಡ ಲಿಲ್ಲ. ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ. ಯಾವುದಾದರೂ ವಾಹನ ಸಂಚರಿಸಿದರೆ ಧೂಳು ತುಂಬಿಕೊಂಡು ಮುಂದೆ ಬರುವ ವಾಹನವೇ ಕಾಣುವುದಿಲ್ಲ. ಶೀಘ್ರದಲ್ಲಿ ರಸ್ತೆಗೆ ಡಾಂಬರು ಹಾಕಬೇಕು' ಎಂದು ಸ್ಥಳೀಯ ನಿವಾಸಿ ಫಕ್ಕೀರಪ್ಪ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.