ADVERTISEMENT

‘ಹನಿ ನೀರಾವರಿ ಯೋಜನೆಗೆ 465 ಕೋಟಿ ರೂ ಟೆಂಡರ್’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 7:42 IST
Last Updated 3 ಅಕ್ಟೋಬರ್ 2017, 7:42 IST

ಮುಂಡರಗಿ: ‘ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆ ಅಡಿ ತಾಲ್ಲೂಕಿನ ಎತ್ತರದ ಪ್ರದೇಶಗಳಲ್ಲಿರುವ ಗ್ರಾಮಗಳ ಜಮೀನಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹನಿ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ 465 ಕೋಟಿ ರೂ ಅನುದಾನದಲ್ಲಿ ಟೆಂಡರ್ ಕರೆಯಲಾಗಿದೆ’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದ ಗಂಗಾಪೂಜೆ ಹಾಗೂ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನ ಕಲಕೇರಿ ಗ್ರಾಮದ ಬಳಿ ಸುಮಾರು ಸಾವಿರ ಎಕರೆ ಭೂಮಿಯಲ್ಲಿ ಪ್ರಾಯೋಗಿಕವಾಗಿ ಹನಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಯೋಜನೆಯ ಮೊದಲ ಹಂತವನ್ನು ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ’ ಎಂದರು.

ADVERTISEMENT

‘ಸಿಂಗಟಾಲೂರು ಹುಲಿಗುಡ್ಡ ಏತ ನೀರಾವರಿ ಯೋಜನೆಯ ಅಡಿಯಲ್ಲಿ ವರ್ಷದಲ್ಲಿ 125 ದಿನಗಳ ಕಾಲ ನೀರು ಬಳಸಿಕೊಳ್ಳಲು ಅವಕಾಶವಿವೆ. ಈ ಅವಧಿಯಲ್ಲಿ ತಾಲ್ಲೂಕಿನ ಎಲ್ಲ ಕೆರೆ, ಚೆಕ್ ಡ್ಯಾಂ, ಬಾಂದಾರಗಳನ್ನು ತುಂಬಿಸಲಾಗುವುದು. ಶಿರಹಟ್ಟಿ ತಾಲ್ಲೂಕಿನ 26 ಕೆರೆ, 80 ಚೆಕ್ ಡ್ಯಾಂಗಳನ್ನು ತುಂಬಿಸಲು ₨143 ಕೋಟಿ ಅನುದಾನದಲ್ಲಿ ಟೆಂಡರ್ ಕರೆಯುಲಾಗಿದೆ’ ಎಂದು ತಿಳಿಸಿದರು.

‘ಹನಿ ನೀರಾವರಿ ಪದ್ಧತಿಯಿಂದ ಸುಮಾರು 50 ಸಾವಿರ ಎಕರೆ ಜಮೀನಿಗೆ ನೀರು ಹರಿಯಲಿದೆ. ರೈತರಿಗೆ ನೀರು ಕೊಡಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಹೋಗಲಾಡಿಸಲು ಕಲಕೇರಿ ಗ್ರಾಮದ ಬಳಿ ಇರುವ ಪಂಪ್ ಹೌಸ್ ಮೂಲಕ ಪ್ರಾಯೋಗಿಕವಾಗಿ ಹನಿ ನೀರಾವರಿ ಪದ್ಧತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಹೇಳಿದರು.

ಕಲಕೇರಿ ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಷನಬಿ ಅಳವಂಡಿ, ಶಂಕ್ರಪ್ಪ ದೇಸಾಯಿ, ಶಿವಲಿಂಗಯ್ಯ ಗುರುವಿನ, ಧ್ರುವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದನಗೌಡ ಪಾಟೀಲ, ಶಂಕರ ದೇವರಮನಿ, ಮುತ್ತಯ್ಯ ಹಿರೇಮಠ, ಸಿದ್ದಣ್ಣ ತಳಕಲ್, ಲಿಂಗಪ್ಪ ಉಪ್ಪಾರ, ಪಿಡಿಒ ಶಂಶುದ್ಧಿನ, ಎಂ.ಜಿ.ವಡ್ಡಟ್ಟಿ, ಶರಣಪ್ಪ ಕುಬಸದ, ಈಶ್ವರಗೌಡ ಪಾಟೀಲ, ಎಂ.ಯು.ಮಕಾನದಾರ, ಜಯಣ್ಣ ದ್ರಾಕ್ಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.