ADVERTISEMENT

ಪ್ರಧಾನಿ ಮಧ್ಯಸ್ಥಿಕೆಗೆ ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:20 IST
Last Updated 28 ಜನವರಿ 2018, 10:20 IST

ನರಗುಂದ: ‘ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಸ್ಥಿಕೆ ವಹಿಸಬೇಕು’ ಎಂದು ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 927ನೇ ದಿನವಾದ ಶನಿವಾರ ಅವರು ಮಾತನಾಡಿದರು. ‘ನ್ಯಾಯಮಂಡಳಿ ಸೂಚನೆಯಂತೆ ಮೂರು ರಾಜ್ಯಗಳು ಮಾತುಕತೆಗೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದರು.

‘ಎಲ್ಲದಕ್ಕೂ ಮಲಪ್ರಭಾ ಅವಲಂಬಿಸುವಂತಾಗಿದೆ. ಮಹದಾಯಿ ಜಾರಿಯಾದರೆ ಮಾತ್ರ ಅದು ಭರ್ತಿಯಾಗಲು ಸಾಧ್ಯ. ಎಲ್ಲರೂ ಇದರತ್ತ ಗಮನಹರಿಸಬೇಕಿದೆ. ವಿಶೇಷವಾಗಿ ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ಮನವೊಲಿಸಬೇಕು. ರಾಜ್ಯದ ಕಾಂಗ್ರೆಸ್‌ ಪಕ್ಷ ಗೋವಾದ ಕಾಂಗ್ರೆಸ್‌ ಮನವೊಲಿಸಬೇಕು. ಈ ಭಾಗದ ಶಾಸಕರು, ಸಂಸದರು ಇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಹೋರಾಟ ಸಮಿತಿ ಸದಸ್ಯ ಚನ್ನಪ್ಪಗೌಡ ಪಾಟೀಲ ಮಾತನಾಡಿ, ‘ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಹದಾಯಿ ವಿಷಯದಲ್ಲಿ ರಾಜಕೀಯ ಕುತಂತ್ರ ನಡೆಯುತ್ತಿದೆ. ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸದೆ, ರಾಜಕೀಯ ಪಕ್ಷಗಳು ಇನ್ನೇನು ನೀರು ಬಂತು ಎನ್ನುವಂತೆ ವರ್ತಿಸುತ್ತಿದ್ದಾರೆ. ಇದು ಸಲ್ಲದು’ ಎಂದರು.

ಧರಣಿಯಲ್ಲಿ ಎ.ಪಿ.ಪಾಟೀಲ, ಭರತಕುಮಾರ, ಈರಣ್ಣ ಗಡಗಿಶೆಟ್ಟರ, ವೀರಣ್ಣ ಸೊಪ್ಪಿನ, ಸೋಮಲಿಂಗಪ್ಪ ಆಯಟ್ಟಿ, ಕಲ್ಲಪ್ಪ ಮೊರಬದ ಮಹದಾಯಿ ಹೋರಾಟ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.