ADVERTISEMENT

ಸದಾಶಿವ ಆಯೋಗ ವರದಿ ಜಾರಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 10:05 IST
Last Updated 30 ಜನವರಿ 2018, 10:05 IST
ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸೋಮವಾರ ಗದುಗಿನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು
ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸೋಮವಾರ ಗದುಗಿನಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು   

ಗದಗ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ, ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಸೋಮವಾರ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಘಟಕ, ಬಂಜಾರಾ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

‘ಸಂವಿಧಾನದಲ್ಲಿ ಎಲ್ಲಿಯೂ ಒಳಮೀಸಲಾತಿ ಎಂಬ ಶಬ್ದ ಇಲ್ಲ. ಸದಾಶಿವ ಆಯೋಗವು ಒಳಮೀಸಲಾತಿ ಕಲ್ಪಿಸಿರುವುದು ತಪ್ಪು. ಆಯೋಗದ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಬಂಜಾರಾ ಸಮುದಾಯದ ಅಧ್ಯಕ್ಷ ರವಿಕಾಂತ ಅಂಗಡಿ ಆಗ್ರಹಿಸಿದರು.

‘ಇದು ಯಾರ ವಿರುದ್ಧದ ಹೋರಾಟವಲ್ಲ. ಯಾರು ಸದಾಶಿವ ಆಯೋಗದ ವರದಿಯ ಪರವಾಗಿ ನಿಲ್ಲುವರೋ ಅವರ ವಿರುದ್ಧವಾಗಿ ನಮ್ಮ ಹೋರಾಟವಿದೆ’ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ವಿದ್ಯಾದರ ದೊಡ್ಡಮನಿ ಹೇಳಿದರು.

ADVERTISEMENT

ಮೋಹನ ಭಜಂತ್ರಿ, ಪರಶುರಾಮ ಕಟ್ಟಿಮನಿ, ಸುರೇಶ ಕಟ್ಟಿಮನಿ, ಐ.ಎಫ್ ಬೆಟಗೇರಿ, ವೈ.ಜಿ.ಗಡಾದ, ಸೋಮಣ್ಣ ಲಮಾಣಿ, ಪರಮೇಶ ಲಮಾಣಿ, ಶಣ್ಮುಖ ಕಾರಬಾರ, ಗಿರೀಶ ಕಾರಬಾರಿ ಇದ್ದರು.ಜಿಲ್ಲೆಯ 50ಕ್ಕೂ ಹೆಚ್ಚು ತಾಂಡಾದಿಂದ ನೂರಾರು ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆಯು ಮಹಾತ್ಮಾಗಾಂಧಿ ವೃತ್ತದಿಂದ ಆರಂಭವಾಗಿ ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ ವೃತ್ತ, ಬಸವೇಶ್ವರ ವೃತ್ತ, ಕೆ.ಎಚ್.ಪಾಟೀಲ ವೃತ್ತ, ಭೂಮರಡ್ಡಿ ವೃತ್ತ, ಜನರಲ್ ಕಾರ್ಯಪ್ಪ ವೃತ್ತದ ಮಾರ್ಗವಾಗಿ ಕಾಟನ್‌ಸೇಲ್‌ ಸೊಸೈಟಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಮನವಿ ಸಲ್ಲಿಸಿದರು.

ಭರವಸೆ: ಸಚಿವ ಎಚ್.ಕೆ.ಪಾಟೀಲ ಅವರು ಪ್ರತಿಭಟನಾ ನಿರತ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿರುವುದರಿಂದ ನೇರವಾಗಿ ಮನವಿ ಸ್ವೀಕರಿಸಿಲು ಸಾಧ್ಯವಾಗುತ್ತಿಲ್ಲ, ಸರ್ಕಾರ ಏಕಪಕ್ಷಿಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಜ.3 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

* * 

ಸರ್ಕಾರ ದಲಿತರನ್ನು ಒಡೆದಾಳುವ ನೀತಿಯನ್ನು ಕೈಬಿಡಬೇಕು. ರಾಜಕೀಯ ಸ್ವಾರ್ಥಕ್ಕೆ ನಮ್ಮನ್ನು ಬಲಿಕೊಡಬೇಡಿ
ಚಂದ್ರಕಾಂತ ಚವ್ಹಾಣ
ಬಂಜಾರಾ ಸಮುದಾಯದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.