ADVERTISEMENT

ಬಿಸಿಯೂಟ ನೌಕರರ ಅನಿರ್ದಿಷ್ಟವಾಧಿ ಧರಣಿ ಫೆ.8 ರಿಂದ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 9:31 IST
Last Updated 1 ಫೆಬ್ರುವರಿ 2018, 9:31 IST

ಗದಗ: ‘ಬಿಸಿಯೂಟ ನೌಕರರಿಗೆ ಮಾಸಿಕ ₹5 ಸಾವಿರ ವೇತನ ನೀಡುವುದು, ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.8ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟವಾಧಿ ಧರಣಿ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ 1,500ಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ’ ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಹಿರೇಮಠ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಗದಗ ಜಿಲ್ಲೆ ಸೇರಿ ರಾಜ್ಯದ ಎಲ್ಲ ಅಕ್ಷರ ದಾಸೋಹ ನೌಕರರು ಅಡುಗೆ ಮಾಡುವುದನ್ನು ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳದಲ್ಲಿ ಬಿಸಿಯೂಟ ಮಹತ್ತರ ಪಾತ್ರ ವಹಿಸಿದೆ. ಆದರೆ, ಸರ್ಕಾರ ಕೇಂದ್ರೀಕೃತ ಅಡುಗೆ ಕೇಂದ್ರ ಮಾಡಿ, ಅದನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಹೊರಟಿದೆ. ಈ ಕಾರಣದಿಂದ ಅನುದಾನವನ್ನೂ ಕಡಿತಗೊಳಿಸುತ್ತಿದೆ, ನೌಕರರನ್ನು ತೆಗೆದು ಹಾಕಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಬಿಸಿಯೂಟ ಯೋಜನೆಯಲ್ಲಿ ಶೇ 95ರಷ್ಟು ಮಹಿಳೆಯರೇ ನೌಕರರು. ಮೊದಲು ಮಾಸಿಕ ₹400 ಗೌರವಧನ ಇತ್ತು. ನಂತರ ಅದು ₹2,100 ಆಗಿದೆ. ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ವೇತನ ಪರಿಷ್ಕರಣೆ ಆಗಿಲ್ಲ. ನೌಕರರು ಬೆಳಿಗ್ಗೆಯಿಂದ ಸಂಜೆ 4 ರವೆರೆಗೆ ಕೆಲಸ ಮಾಡಿದರೂ ಕನಿಷ್ಠ ಕೂಲಿಯೂ ಸಿಗುತ್ತಿಲ್ಲ’ ಎಂದರು.

ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಯಶೋದಾ ಬೆಟಗೇರಿ, ನಾಗರತ್ನ ಬಡಿಗಣ್ಣವರ, ಪುಷ್ಪಾ ಚವ್ಹಾಣ, ಶೋಭಾ ನರಗುಂದ, ಬೀಬಿಜಾನ ಮುಲ್ಲಾ, ಅನ್ನಪೂರ್ಣ ಮಡಿವಾಳರ, ಗಂಗಮ್ಮ ಪೂಜಾರ, ಸಿದ್ದಮ್ಮ ಬೆಳವಣಿಕಿ, ಪ್ರೇಮಾ ಮಿಟ್ಟಲಕೋಡ, ಅನಿತಾ ಕುರಡಕೇರ, ಶಿವಾನಂದ ಭೋಸ್ಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.