ADVERTISEMENT

ಗದಗ | ಒಂದೇ ದಿನ 9 ಸೋಂಕಿತರು ಗುಣಮುಖ

ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ 8 ವರ್ಷದ ಬಾಲಕಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:15 IST
Last Updated 5 ಜೂನ್ 2020, 20:15 IST
ಶುಕ್ರವಾರ 9 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್‌–19 ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದರು
ಶುಕ್ರವಾರ 9 ಮಂದಿ ಸೋಂಕಿತರು ಗುಣಮುಖರಾಗಿ ಕೋವಿಡ್‌–19 ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದರು   

ಗದಗ: ಕೊರೊನಾ ಸೋಂಕು ದೃಢಪಟ್ಟು ಇಲ್ಲಿನ ಕೋವಿಡ್‌–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನರು ಶುಕ್ರವಾರ ಒಂದೇ ದಿನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ, ದಿನವೊಂದರಲ್ಲಿ ಸೋಂಕಿನಿಂದ ಗುಣಮುಖಗೊಂಡವರ ಗರಿಷ್ಠ ಸಂಖ್ಯೆ ಇದಾಗಿದೆ. ವಿಶೇಷವೆಂದರೆ ಆಸ್ಪತ್ರೆಯಿಂದ ಬಿಡುಗಡೆಗೊಂಡವರಲ್ಲಿ 8 ವರ್ಷದ ಎಂಟು ವರ್ಷದ ಬಾಲಕಿ ಕೂಡ (ಪಿ–1937) ಸೇರಿದ್ದಾರೆ.

ಜಿಲ್ಲೆಯ ಕಂಟೈನ್‌ಮೆಂಟ್‌ ಪ್ರದೇಶವಾದ ಗದುಗಿನ ಗಂಜಿ ಬಸವೇಶ್ವರ ಓಣಿಯ ನಿವಾಸಿ 62 ವರ್ಷದ ಪುರುಷನಲ್ಲಿ (ಪಿ-913) ಮೇ 12ರಂದು ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕಕ್ಕೆ ಬಂದ ಒಟ್ಟು 11 ಮಂದಿಗೆ ಸೋಂಕು ತಗುಲಿತ್ತು. ಇವರಲ್ಲಿ 7 ಮಂದಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ADVERTISEMENT

ಇವರಲ್ಲಿ 50 ವರ್ಷದ ಮಹಿಳೆ (ಪಿ– 1932) 19 ವರ್ಷದ ಯುವತಿ (ಪಿ–1933) 22 ವರ್ಷದ ಯುವತಿ (ಪಿ– 1934) 18 ವರ್ಷದ ಯುವಕ (ಪಿ–1935) 48 ವರ್ಷದ ಪುರುಷ (ಪಿ–1936) 8 ವರ್ಷದ ಬಾಲಕಿ (ಪಿ–1937) 21 ವರ್ಷದ ಯುವಕ (ಪಿ– 1938) ಸೇರಿದ್ದಾರೆ.

ಗುಜರಾತ್‌ನಿಂದ ಜಿಲ್ಲೆಗೆ ಮರಳಿದ್ದ 62 ವರ್ಷದ ಪುರುಷ (ಪಿ–970) ಹಾಗೂ ಮುಂಬೈನಿಂದ ಜಿಲ್ಲೆಗೆ ಬಂದಿದ್ದ 32 ವರ್ಷದ ಪುರುಷ (ಪಿ–1566) ಕೂಡ ಸೋಂಕಿನಿಂದ ಗುಣಮುಖರಾಗಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ.

ಚಿಕಿತ್ಸೆಯ ನಂತರ, ಮತ್ತೊಮ್ಮೆ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ಈ 9 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಎಲ್ಲ ವರದಿಗಳು ನೆಗಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲರಿಗೂ ಮುಂದಿನ 14 ದಿನ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿರುವಂತೆ ಸೂಚಿಸಲಾಗಿದೆ’ ಎಂದು ಜಿಮ್ಸ್‌ ನಿರ್ದೇಶಕ ಪಿ.ಎಸ್‌ ಭೂಸರೆಡ್ಡಿ ತಿಳಿಸಿದ್ದಾರೆ.

ಮುಂಬೈನಿಂದ ರೈಲಿನ ಮೂಲಕ ಶುಕ್ರವಾರ 40 ಪ್ರಯಾಣಿಕರು ಗದಗ ರೈಲು ನಿಲ್ದಾಣಕ್ಕೆ ಬಂದಿಳಿದರು. 4 ದಿನಗಳಲ್ಲಿ ಒಟ್ಟು 318 ಪ್ರಯಾಣಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದಾರೆ. ಜಿಲ್ಲಾಡಳಿತವು ಈ ಎಲ್ಲ ಪ್ರಯಾಣಿಕರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದೆ.

ಮತ್ತೆರಡು ಹೊಸ ಕಂಟೈನ್ಮೆಂಟ್‌ ಪ್ರದೇಶ
ಗದುಗಿನ ವಾರ್ಡ 35ರ ಹುಡ್ಕೊಕಾಲೋನಿ, 2ನೇ ಅಡ್ಡರಸ್ತೆ ಇದರ ಸುತ್ತಲಿನ 100 ಮೀಟರ್‌ ಪ್ರದೇಶ ಮತ್ತು ತಾಲ್ಲೂಕಿನ ಲಕ್ಕುಂಡಿ ಗ್ರಾಮದ ವಾರ್ಡ್‌ ನಂಬರ್‌ 8ರ ಬಜಾರ್‌ ರಸ್ತೆ ಸುತ್ತಲಿನ 100 ಮೀಟರ್‌ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಘೋಷಿಸಿ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ನಿಯಂತ್ರಿತ ಪ್ರದೇಶದಿಂದ ಹೊರಗೆ, ಇತರೆ ಪ್ರದೇಶಗಳಿಂದ ನಿಯಂತ್ರಿತ ಪ್ರದೇಶಕ್ಕೆ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.