ನರೇಗಲ್: ಭೂಮಿ ಮಾನವನಿಗೆ ಮಾತ್ರ ಸೇರಿದ್ದಲ್ಲ, ಅದು ಎಲ್ಲಾ ಜೀವರಾಶಿಗೂ ಸೇರಿದ್ದು. ಆದಕಾರಣ ಪರಿಸರ ಸಮತೋಲನ ಕಾಪಾಡುವುದು ಮಾನವನ ಆದ್ಯ ಕರ್ತವ್ಯವಾಗಿದೆ ಎಂದು ವಕೀಲ ಭರತಕುಮಾರ ಎ. ಹಾದಿಮನಿ ಹೇಳಿದರು.
ಸಮೀಪದ ಮಾರನಬಸರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಗತ್ ಸಿಂಗ್ ಸಂಘದ ಯುವಕರು ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೆನಡಾದಲ್ಲಿ ಬಿಸಿ ಗಾಳಿಗೆ 500 ಜನರ ಸಾವು, ಆಸ್ಟ್ರೇಲಿಯಾದಲ್ಲಿ ಇಲಿಗಳ ದಾಳಿ, ಭಾರತದಲ್ಲಿ ಮಿಡತೆ ದಾಳಿ ಹೀಗೆ ಸಾಲು ಸಾಲು ಸಮಸ್ಯೆಗಳು ಉದ್ಭವವಾಗಲು ಮಾನವನ ದುರಾಸೆಯಿಂದ ನಡೆದ ಪರಿಸರ ನಾಶವೇ ಕಾರಣವಾಗಿದೆ ಎಂದರು. ಹಿಂದಿನ ಕಾಲದಲ್ಲಿ ಭೂಮಿ ಅಗೆದು ಗಡ್ಡೆ, ಗೆಣಸು ತಿಂದಾಗ ಸಾಂಕ್ರಾಮೀಕ ರೋಗಗಳು ಬರಲಿಲ್ಲ ಆದರೆ ಈಗಿನ ಕಾಲದಲ್ಲಿ ಭೂಮಿ ಅಗೆದು ಚಿನ್ನ, ಖನಿಜ ಮಾರಾಟ
ಮಾಡುತ್ತಿರುವುದಕ್ಕೆ ರೋಗಗಳ ಹಾವಳಿ ಮಿತಿಮೀರಿದೆ ಎಂದರು. ಇನ್ನಾದರು ಮಾನವ ಜಾಗೃತನಾಗಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.
ಗ್ರಾಮದ ಹಿರಿಯ ಚಂದ್ರಕಾಂತ ಮಾರನಬಸರಿ ಮಾತನಾಡಿ, ಮನುಷ್ಯ ಉತ್ತಮ ಆರೋಗ್ಯ ಮತ್ತು ನೆಮ್ಮದಿ ಜೀವನ ನಡೆಸಲು ಇದ್ದ ಗಿಡಗಳನ್ನು ನಾಶ ಮಾಡದೆ ಹೆಚ್ಚೆಚ್ಚು ಸಸಿಗಳನ್ನು ಸ್ವಇಚ್ಚೆಯಿಂದ ಬೆಳೆಸಲು ಮುಂದಾಗಬೇಕು.
ಜಮೀನುಗಳಲ್ಲಿ, ರಸ್ತೆಬದಿಯಲ್ಲಿ, ದೇವಸ್ಥಾನ, ಶಾಲಾ ಕಾಲೇಜು, ಉದ್ಯಾನದ ಅವರಣಗಳಲ್ಲಿ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಶಾಲಾ ಆವರಣದಲ್ಲಿ ಸಾವಿರ ಸಸಿಗಳನ್ನು ನೆಡಲಾಯಿತು ಹಾಗೂ ಮಕ್ಕಳಿಗೆ ಪರಿಸರ
ಸಂರಕ್ಷಣೆಯ ಪ್ರತಿಜ್ಞಾವಿಧಿ ಬೊಧಿಸಲಾಯಿತು. ಶರಣಪ್ಪ ಮ್ಯಾಗೇರಿ, ಪರಸಪ್ಪ ತಳವಾರ, ಜಿ.ಎನ್. ಉಮೇಶ, ದಸ್ತಗಿರ್ ಅಹ್ಮದ್ ದೊಟಿಹಾಳ, ಆರ್.ಬಿ. ಪ್ರಭಣ್ಣವರ, ಎಸ್.ವೈ. ಜಗ್ಗಲ, ಸುನೀಲ ಮರಡಿ, ಆನಂದ ಮಡಿವಾಳರ, ಕಳಕೇಶ ಮರಡಿ, ಮಂಜುನಾಥ ಚಿತ್ತವಾಡಗಿ, ಕಾರ್ತಿಕ ದಿಂಡೂರ, ಶ್ರೀಕಾಂತ ಹಾದಿಮನಿ, ನಾಗರಾಜ ಹುಯಿಲಗೋಳ, ಶರಣಪ್ಪ ಮರಡಿ, ಮಂಜುನಾಥ ಶೆಲೂಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.