ಗದಗ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ನಗರದ ಕೆ.ಎಚ್. ಪಾಟೀಲ ವೃತ್ತದ ಬಳಿಯ ಕಾಟನ್ರಸ್ತೆಯ ಗಣಪತಿ ಮತ್ತು ಖಾನತೋಟ ಗಜಾನನ ಯುವಕ ಮಂಡಳಿ ಶ್ರೀರಾಮ ಸೇನೆಯ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯು ಮಂಗಳವಾರ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಖಾನತೋಟ ಓಣಿಯಿಂದ ಆರಂಭವಾದ ಮೆರವಣಿಗೆಯು ಡಿ.ಸಿ. ಮಿಲ್ ರಸ್ತೆ, ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ, ನಾಮಜೋಷಿ ರಸ್ತೆ ಮೂಲಕ ಭೀಷ್ಮಕೆರೆ ತಲುಪಿ ವಿಸರ್ಜನೆ ಮಾಡಲಾಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿನ ಹಿಂದೂ ಮಹಾಗಣಪತಿಯು ಅಲ್ಲಿಂದ ಮೆರವಣಿಗೆ ಮೂಲಕ ಭೀಷ್ಮಕೆರೆ ತಲುಪಿತು.
ಖಾನತೋಟದ ಗಜಾನನ ಯುವಕ ಮಂಡಳಿಯ ಗದಗ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭುವನೇಶ್ವರಿ ಮೂರ್ತಿ, ಶ್ರೀರಾಮನ ಬಂಟ ಹನುಮನ ಮೂರ್ತಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಗಮನ ಸೆಳೆದವು.
ಖಾನತೋಟ ಗಜಾನನ ಯುವಕ ಮಂಡಳಿಯ ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ್, ಗಣಪತಿ ಬಪ್ಪ ಮೋರಯಾ, ಭಾರತ್ ಮಾತಕೀ ಜೈ ಘೋಷಣೆಗಳು ಮೊಳಗಿದವು.
ಎರಡೂ ಮೆರವಣಿಗೆ ವೇಳೆ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.