ADVERTISEMENT

ಸಿದ್ದರಾಮಯ್ಯ ಭೇಟಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ: ಸಿ.ಸಿ.ಪಾಟೀಲ

ಜೂನ್ 3ರಂದು ಲಕ್ಕುಂಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಮೇ 2025, 16:49 IST
Last Updated 30 ಮೇ 2025, 16:49 IST
ಲಕ್ಕುಂಡಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸಿದರು.
ಲಕ್ಕುಂಡಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಶಾಸಕ ಸಿ.ಸಿ.ಪಾಟೀಲ ಉದ್ಘಾಟಿಸಿದರು.   

ಲಕ್ಕುಂಡಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಖನನ ಕಾಮಗಾರಿಗೆ ಚಾಲನೆ ನೀಡಲು ಜೂನ್ 3ರಂದು ಲಕ್ಕುಂಡಿಗೆ ಭೇಟಿ ನೀಡಲಿದ್ದು, ಗ್ರಾಮದ ಸರ್ವರೂ ಪಕ್ಷಾತೀತವಾಗಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳೀದರು.

ಇಲ್ಲಿಯ ಗ್ರಾಮ ಪಂಚಾಯತಿ ಆವರಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡುವ ನಿಮಿತ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮ ಉದ್ಘಾಟನೆಗೆ ಸಿಎಂ ಬರಲಿದ್ದಾರೆ.  ಪ್ರವಾಸೋದ್ಯಮ ಬೆಳೆಯಲು, ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ, ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರಮುಖ ಬೇಡಿಕೆಗಳನ್ನು ಗ್ರಾಮದ ವತಿಯಿಂದ ಸಲ್ಲಿಸಲು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿ ತಯಾರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಉತ್ಖನನ ಕಾಮಗಾರಿ ಮಾಡುತ್ತಿರುವುದರಿಂದ ಲಕ್ಕುಂಡಿ ವೈಭವ ಮರುಕಳಿಸಲಿದೆ. ಇದೇ ವೇಳೆ, ಗ್ರಾಮದಲ್ಲಿ ₹ 72.80 ಲಕ್ಷ ವೆಚ್ಚದಲ್ಲಿ ಶಾಲೆ, ಗ್ರಂಥಾಲಯ, ಅಂಗನವಾಡಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಇನ್ನೂ ₹79.96 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಇವುಗಳ ಸದುಪಯೋಗ ಪಡೆಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, 'ಈಚೆಗೆ ಗ್ರಾಮದಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಸಂದರ್ಭದಲ್ಲಿ 1500ಕ್ಕೂ ಹೆಚ್ಚು ಅವಶೇಷಗಳು ದೊರೆತಿದ್ದವು. ಅವುಗಳನ್ನು ಇರಿಸಲು ಬಯಲು ವಸ್ತು ಸಂಗ್ರಹಾಲಯ ಮಾಡಲು ಬಜೆಟ್‌ನಲ್ಲಿ ಘೋಷಿಸಿರುವಂತೆ ಸಿಎಂ ಭೂಮಿಪೂಜೆ ನೆರವೇರಿಸಲಿದ್ದಾರೆ’ ಎಂದರು.

ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, ‘11 ಮತ್ತು 12ನೇ ಶತಮಾನದಿಂದ ಕಲ್ಯಾಣ ಚಾಲುಕ್ಯರು, ಹೊಯ್ಸಳರು, ಸೇರಿದಂತೆ ಹಲವು ರಾಜರು ಆಳಿ ಈ ನೆಲವನ್ನು ಸ್ವರ್ಗವನ್ನಾಗಿ ಮಾಡಿದ್ದರು. ಆ ಗತ ವೈಭವ ಮತ್ತೆ ಮರುಕಳಿಸಲು ಮತ್ತು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಲು ಉತ್ಖನನ ಕಾರ್ಯದೊಂದಿಗೆ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ. ಉತ್ಖನನದಿಂದ ಅಮೂಲ್ಯ ಅವಶೇಷಗಳ ದೊರೆತು ಇಡೀ ಜಗತ್ತೇ ಲಕ್ಕುಂಡಿಯನ್ನು ನೋಡುವಂತಾಗಬೇಕಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ‘ಗ್ರಾಮದ ದೇಗುಲದ ಪಕ್ಕ ಮತ್ತು ರಸ್ತೆಯ ಪಕ್ಕದಲ್ಲಿ ಇರುವ ತಿಪ್ಪೆಗಳನ್ನು ತೆಗೆಯಬೇಕು. ಗ್ರಾಮಸ್ಥರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಮುಖ್ಯಮಂತ್ರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

ಗ್ರಾಮದ ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಅಜ್ಜಣ್ಣ ಪಾಟೀಲ ಒತ್ತಾಯಿಸಿದರು.

ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಬಿ.ಕಲಕೇರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ವಸಂತ ಮೇಟಿ, ಈಶ್ವರಪ್ಪ ಕುಂಬಾರ, ಗ್ರಾಮ ಪಂಚಾಯಿತಿ ಸದಸ್ಯರು ವೇದಿಕೆಯಲ್ಲಿದ್ದರು.

ಉತ್ಖನನದ ನೆಪದಲ್ಲಿ ಲಕ್ಕುಂಡಿ ಅಭಿವೃದ್ದಿ ಪ್ರಾಧಿಕಾರವು ಜನ ವಸತಿ ಕುಟುಂಬಗಳಿಗೆ ತೊಂದರೆ ಕೊಡಬಾರದು. ಜನರನ್ನು ಒಕ್ಕಲೆಬ್ಬಿಸುವಂತಹ ಕಾರ್ಯ ನಡೆಸಬಾರದು
ಸಿ.ಸಿ.ಪಾಟೀಲ ಶಾಸಕ

ಪಿಡಿಒ ಅಮೀರನಾಯಕ ಸ್ವಾಗತಿಸಿದರು. ಮುಖ್ಯಶಿಕ್ಷಕ  ಕೆ.ಬಿ.ಕೊಣ್ಣೂರು ಕಾರ್ಯಕ್ರಮ ನಿರೂಪಿಸಿದರು.

ಜನರಲ್ಲಿ ಇರುವ ಉತ್ಕನನದ ಆತಂಕ ದೂರ ಮಾಡಿ

ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಗ್ರಾಮಸ್ಥರು ಗದಗ ಶಹರಕ್ಕೆ ಅಲೆದಾಡುತ್ತಿದ್ದು ಗ್ರಾಮಕ್ಕೆ ನಾಡ ಕಾರ್ಯಾಲಯ ಸ್ಥಾಪನೆಗೆ ಸಿಎಂ ಬಳಿ ಮನವಿ ಮಾಡಬೇಕು ಎಂದು ಮರಿಯಪ್ಪ ವಡ್ಡರ ತಿಳಿಸಿದರು. ಶೈಕ್ಷಣಿಕ ಅಭಿವೃದ್ದಿಗೆ ಪ್ರಥಮ ದರ್ಜೆ ಕಾಲೇಜು ಪಿಯು ವಿಜ್ಞಾನ ಕಾಲೇಜು ಸ್ಥಾಪಿಸಬೇಕು. ಉತ್ಖನನ ಮಾಡುವ ಬಗ್ಗೆ ಗ್ರಾಮಸ್ಥರಲ್ಲಿ ಭಯದ ವಾತವಾರಣವಿದ್ದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ಮಾಹಿತಿ ನೀಡಬೇಕು. ಪ್ರವಾಸಿಗರಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಪ್ರವಾಸೋಧ್ಯಮ ಅಭಿವೃದ್ಧಿಯೊಂದಿಗೆ ನಿರೋದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸುವಂತಾಗಬೇಕು ಎಂದು ನಿವೃತ್ತ ಸೈನಿಕ ದತ್ತಾತ್ರೇಯ ಜೋಶಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.