ADVERTISEMENT

ಅಜಾತಶತ್ರು ಬಿದರೂರ: ಸಚಿವ ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 3:56 IST
Last Updated 26 ನವೆಂಬರ್ 2022, 3:56 IST
ಗದಗ ಶಾಸಕ ಎಚ್‌.ಕೆ.ಪಾಟೀಲ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಶ್ರೀಶೈಲಪ್ಪ ಬಿದರೂರ ಅವರ ಮೃತದೇಹ ವೀಕ್ಷಿಸಿ, ನಮನ ಸಲ್ಲಿಸಿದರು
ಗದಗ ಶಾಸಕ ಎಚ್‌.ಕೆ.ಪಾಟೀಲ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಶ್ರೀಶೈಲಪ್ಪ ಬಿದರೂರ ಅವರ ಮೃತದೇಹ ವೀಕ್ಷಿಸಿ, ನಮನ ಸಲ್ಲಿಸಿದರು   

ಗದಗ: ‘ಆತ್ಮೀಯ ಸ್ನೇಹಿತರು, ದೂರದ ಸಂಬಂಧಿಯೂ ಆಗಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರು ತಮ್ಮ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು’ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಬಿದರೂರ ಅವರು ಮೃತಪಟ್ಟ ವಿಷಯ ಕೇಳಿ ನರಗುಂದದಿಂದ ಗದಗಕ್ಕೆ ಬಂದಿರುವೆ. ಗೆಳೆಯನ ಮನೆಯಲ್ಲಿ ಈಗ ನೀರವ ಮೌನ ಆವರಿಸಿದೆ. ಅವರು ರಾಜಕೀಯ ಜೀವನದಲ್ಲಿ ಅಜಾತಶತ್ರು ಎನಿಸಿಕೊಂಡಿದ್ದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ನಿಕಟವರ್ತಿ ಆಗಿದ್ದರು’ ಎಂದು ತಿಳಿಸಿದರು.

ಬಿಜೆಪಿಯಿಂದ ಶಾಸಕರಾದವರು, ಅನಿವಾರ್ಯ ಕಾರಣದಿಂದ ಕಾಂಗ್ರೆಸ್ ಸೇರಿದ್ದರು. ಅವರ ಅಗಲಿಕೆ ತೀವ್ರ ನೋವು ತರಿಸಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ. ಅವರ ಕುಟುಂಬಸ್ಥರ ಜತೆಗೆ ಚರ್ಚಿಸಿ ಅಂತ್ಯ ಸಂಸ್ಕಾರದ ಬಗ್ಗೆ ನಿರ್ಧಾರ’ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಸಾಹಿತ್ಯಾಸಕ್ತರು, ಶಿಕ್ಷಣಪ್ರೇಮಿ

‘ಶ್ರೀಶೈಲಪ್ಪ ಬಿದರೂರ ಅವರು ಹೃದಯಾಘಾತದಿಂದ ಅಗಲಿರುವುದು ಸಮಾಜಕ್ಕೆ ತುಂಬಲಾರದ ಹಾನಿಯನ್ನುಂಟು ಮಾಡಿದೆ’ ಎಂದು ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದ್ದಾರೆ.

‘ಬಿದರೂರ ಅವರು ರಾಜಕೀಯ ಜೀವನದ ಜತೆಗೆ ಸಾಹಿತ್ಯಾಸಕ್ತರು ಮತ್ತು ಶಿಕ್ಷಣಪ್ರೇಮಿಗಳು ಆಗಿದ್ದರು. ಗದಗ ನಗರದ ಶಾಸಕರಾಗಿ ಜನಸೇವೆ ಮಾಡಿದ್ದರು. ತೋಂಟದಾರ್ಯ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು’ ಎಂದು ತಿಳಿಸಿದ್ದಾರೆ.

ಅಪ್ಪಟ ಗ್ರಾಮೀಣ ಸೊಗಡಿನ ಜನ ನಾಯಕ

ಆತ್ಮೀಯರಾದ ಶ್ರೀಶೈಲಪ್ಪ ಬಿದರೂರ ಇನ್ನಿಲ್ಲ ಎಂಬ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ರೋಣ ಹಾಗೂ ಗದಗ ಮತಕ್ಷೇತ್ರದ ಶಾಸಕರಾಗಿ ಸಾಕಷ್ಟು ಜನಾನುರಾಗಿ ಕೆಲಸ ಮಾಡಿದ್ದಾರೆ. ಜನತಾ ಪರಿವಾರದಿಂದ ಬಂದ ಶ್ರೀಶೈಲಪ್ಪ ಬಿದರೂರು ಸದಾ ಜನರ ಮಧ್ಯೆ ಇದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಮೂಲಕ ಒಬ್ಬ ಅಪ್ಪಟ ಗ್ರಾಮೀಣ ಸೊಗಡಿನ ಜನ ನಾಯಕರಾಗಿದ್ದರು’ ಎಂದು ವಿಧಾನ ಪರಿಷತ್‌ ನಿಕಟಪೂರ್ವ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನಷ್ಟ

‘ಬಿದರೂರ ಅವರು ಸದಾ ಜನರ ಬಗ್ಗೆ, ರೈತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದವರಾಗಿದ್ದರು. ವಿಷಯವನ್ನು ನೇರವಾಗಿಯೇ ಪ್ರತಿಪಾದಿಸುತ್ತಿದ್ದ ಅವರು, ಹೃದಯಾಘಾತದಿಂದ ಸಾವನ್ನಪ್ಪಿರುವುದು ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲದೇ, ವೈಯಕ್ತಿಕವಾಗಿಯೂ ನಷ್ಟ ತಂದಿದೆ’ ಎಂದು ಶಾಸಕ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದ್ದಾರೆ.

ಅವರು ಸಾಹಿತ್ಯಾಸಕ್ತರು ಮತ್ತು ಶಿಕ್ಷಣ ಪ್ರೇಮಿ ಸಹ ಆಗಿದ್ದರು. ಈ ಕಾರಣದಿಂದಲೇ ಶಿಕ್ಷಣ ಸಂಸ್ಥೆ ತೆರೆದು, ಆ ಮೂಲಕ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದ್ದರು ಎಂದು ತಿಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.